Cinema News
ಪವನ್ ಒಡೆಯರ್-ಶಿವಣ್ಣ ಕಾಂಬಿನೇಷನ್ ಚಿತ್ರದ ಫಸ್ಟ್ ಲುಕ್ಗೆ ಭರ್ಜರಿ ಪ್ರತಿಕ್ರಿಯೆ

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ‘ಬೇಲ್’ ಕೂಡ ಒಂದು. ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅಂತಿಮ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇದೀಗ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.
‘ಬೇಲ್’ ಸಿನಿಮಾದಲ್ಲಿ ಶಿವಣ್ಣ ಸಂಪೂರ್ಣ ಹೊಸ ಲುಕ್ನಲ್ಲಿ ದರ್ಶನ ನೀಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಸ್ಟೈಲ್ನಲ್ಲಿ ಕಾಣಿಸಿಕೊಂಡಿರುವ ಅವರು ‘ವಿಜಿ’ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೈಯಲ್ಲಿ ಕೊಡೆ ಹಿಡಿದು, ಸಾಕು ನಾಯಿಯ ಜೊತೆ ನಡೆದು ಬರುವ ಶಿವಣ್ಣನ ಸ್ಟೈಲ್ ಅಭಿಮಾನಿಗಳಿಗೆ ಸಖತ್ ಇಂಪ್ರೆಸ್ ಮಾಡಿದೆ. ಜೊತೆಗೆ ಶಿವರಾಜ್ ಕುಮಾರ್ ಹಾಗೂ ಸಾಯಿ ಕುಮಾರ್ ನಡುವಿನ ಡೈಲಾಗ್ ವಿನಿಮಯ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಫಸ್ಟ್ ಲುಕ್ ವಿಡಿಯೋದಲ್ಲಿ ಮಳೆ ಸುರಿಯುತ್ತಿರುವ ಬೆಂಗಳೂರಿನ ರಾತ್ರಿ ದೃಶ್ಯಗಳ ನಡುವೆ ವಿಜಿಯ ಪಾತ್ರ ಪರಿಚಯವಾಗುತ್ತದೆ. ನಾಯಿಗೆ ಬಿಸ್ಕೆಟ್ ತಿನ್ನಿಸುತ್ತಿರುವ ಸಂದರ್ಭದಲ್ಲೇ ಫೋನ್ ಕಾಲ್ ಬರುತ್ತದೆ. “ನೀನು ಹಚ್ಚಿರುವ ಬೆಂಕಿ ಊರನ್ನೇ ಅಲ್ಲ, ದೇಶವನ್ನೇ ಸುಡುತ್ತಿದೆ” ಎನ್ನುವ ಮಾತಿಗೆ, “ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವತ್ತೂ ಆಗಲ್ಲ” ಎಂಬ ಖಡಕ್ ಡೈಲಾಗ್ ಮೂಲಕ ಶಿವಣ್ಣ ಗಮನ ಸೆಳೆಯುತ್ತಾರೆ.

ಸತ್ಯಘಟನೆಗಳನ್ನು ಆಧರಿಸಿ ಪವನ್ ಒಡೆಯರ್ ಈ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ವೈದ್ಯ ಅವರ ಛಾಯಾಗ್ರಹಣ, ಗುಣ ಅವರ ಪ್ರೊಡಕ್ಷನ್ ಡಿಸೈನ್ ಹಾಗೂ ಶಶಾಂಕ್ ನಾರಾಯಣ್ ಸಂಕಲನ ಚಿತ್ರಕ್ಕಿದೆ. ವಿಭಿನ್ನ ಕಥೆಗಳನ್ನು ನೀಡುತ್ತಾ ಬಂದಿರುವ ಪವನ್ ಒಡೆಯರ್, ಶಿವಣ್ಣಗಾಗಿ ಮತ್ತೊಮ್ಮೆ ವಿಶೇಷ ಕಥೆ ಹೆಣೆದಿದ್ದು, ಕೆವಿಎನ್ ಸಂಸ್ಥೆಯ ವೆಂಕಟ್ ಕೆ. ನಾರಾಯಣ್ ಬಂಡವಾಳ ಹೂಡಿದ್ದಾರೆ. ‘ಬೇಲ್’ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
