Cinema News
ಮೇ 22ಕ್ಕೆ ತೆರೆಗೆ ಬರುತ್ತಿದೆ “ಅಸುರನ ಕೈಯಲ್ಲಿ ಪಾರಿಜಾತ”

ವಿಭಿನ್ನ ಶೀರ್ಷಿಕೆಯ ಮೂಲಕವೇ ಸಿನಿಪ್ರೇಕ್ಷಕರ ಗಮನ ಸೆಳೆದಿರುವ “ಅಸುರನ ಕೈಯಲ್ಲಿ ಪಾರಿಜಾತ” ಸಿನಿಮಾ ಇದೇ ತಿಂಗಳ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೀಕ್ಷಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕನ್ನಡದ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಜೊತೆಗೆ ಚಿತ್ರದ ಮೊದಲ ಪೋಸ್ಟರ್ ಕೂಡ ಕುತೂಹಲ ಹೆಚ್ಚಿಸಿದೆ.
ನಿರ್ದೇಶಕ ತೇಜಸ್ವಿ ವಿಘ್ನೇಶ್ ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತಿಹಾಸ ಮತ್ತು ಆಧುನಿಕತೆಯ ಅಂಶಗಳನ್ನು ಬೆರೆಸಿ, ವಾಸ್ತವಿಕತೆಗೆ ಹತ್ತಿರವಾಗಿರುವ ಕಥೆಯನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. “ಅಸುರನ ಕೈಯಲ್ಲಿ ಪಾರಿಜಾತ” ಎಂಬ ಶೀರ್ಷಿಕೆಯ ಹಿಂದಿರುವ ಅರ್ಥವೇ ಚಿತ್ರದ ಪ್ರಮುಖ ಆಕರ್ಷಣೆ. ಜೀವನ ಎಂಬ ಪಾರಿಜಾತ ಹೂವು ಅಸುರ ಗುಣದ ಕೈಗೆ ಸಿಲುಕಿದಾಗ ಮನುಷ್ಯ ಹೇಗೆ ತನ್ನ ಮಾನವೀಯತೆಯನ್ನು ಕಳೆದುಕೊಳ್ಳುತ್ತಾನೆ ಎಂಬುದನ್ನು ಚಿತ್ರದಲ್ಲಿ ಆಂತರಿಕವಾಗಿ ಚಿತ್ರಿಸಲಾಗಿದೆ.

ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ಪ್ರದೀಪ್ ಪೂಜಾರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕಾರ್ತಿಕ್ ಮತ್ತು ಯಶ್ ಶೆಟ್ಟಿ ನಾಯಕರೆಾಗಿ ಅಭಿನಯಿಸಿದ್ದಾರೆ. “ಪಾರಿಜಾತ” ಪಾತ್ರದಲ್ಲಿ ಕಿರುತೆರೆ ನಟಿ ರಜನಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೆ.ಎಸ್. ಶ್ರೀಧರ್, ಮಂಜುನಾಥ್ ಹೆಗಡೆ, ಮಮತಾ, ಡಾ. ಲೀಲಾ ಮೋಹನ್, ವಿಮರ್ಶ ಗೌಡ, ನಿಶಾ ಕೊಪ್ಪಳೇಕರ್, ಕೀರ್ತನಾ ಕೂರ್ಗ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣ ಚಿತ್ರಕ್ಕೆ ವಿಶೇಷ ಮೆರುಗು ನೀಡಿದ್ದು, ಕ್ರಿಸ್ಟೋಫರ್ ಜಾಯ್ಸನ್ ಸಂಗೀತ ಸಂಯೋಜಿಸಿರುವ ಹಾಡುಗಳು ಮನಸೆಳೆಯುತ್ತಿವೆ. ನವೀನ್ HV ಸಾಹಸ ನಿರ್ದೇಶನದಲ್ಲಿ ಆಕ್ಷನ್ ದೃಶ್ಯಗಳು ಮೂಡಿಬಂದಿವೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಚಿತ್ರೀಕರಣ ನಡೆದಿದ್ದು, ಮಂಗಳೂರು, ಮೈಸೂರು, ಉಡುಪಿ ಮತ್ತು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೇ 22ರಂದು ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
