Cinema News

ಪಸಂದಾಗಿದೆ “ರವಿಕೆ ಪ್ರಸಂಗ”ದ ಟೀಸರ್ .

Published

on

ಹೆಣ್ಣುಮಕ್ಕಳು ಮನೆಯಲ್ಲಿ ಯಾವುದೇ ಸಮಾರಂಭವಾದರೂ ಸೀರೆಗೆ ತಕ್ಕಂತೆ ರವಿಕೆ ಹೊಲಿಸಿಕೊಳ್ಳುವುದು ರೂಡಿ. ಅಂತಹ ರವಿಕೆಯ ಕುರಿತಾದ ” ರವಿಕೆ ಪ್ರಸಂಗ” ಎಂಬ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಪ್ರಚಾರದ ಮೊದಲ ಹೆಜ್ಜೆಯಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮಕ್ಕೆ ಮಾಹಿತಿ ನೀಡಿದರು.

 

 

ನಮ್ಮ ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ನನ್ನ ಪತ್ನಿ ಪಾವನ ಸಂತೋಷ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. “ಬ್ರಹ್ಮ ಗಂಟು” ಧಾರಾವಾಹಿ ಖ್ಯಾತಿಯ ಗೀತಾಭಾರತಿ ಭಟ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುನನ್ ರಂಗನಾಥ್, ಪದ್ಮಜಾರಾವ್, ರಘು ಪಾಂಡೇಶ್ವರ್ ಹೀಗೆ ಸಾಕಷ್ಟು ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿಧರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಸಂಕಲನವಿರುವ “ರವಿಕೆ ಪ್ರಸಂಗ” ಚಿತ್ರದ ಮೊದಲ ಪ್ರತಿ ಸದ್ಯದಲ್ಲೇ ಬರಲಿದೆ. ವಿಭಿನ್ನ ಕಥೆಯ ಈ ಚಿತ್ರ ಎಲ್ಲರಿಗೂ ಹಿಡಿಸಲಿದೆ ಎಂದು ಚಿತ್ರದ ಕುರಿತು ನಿರ್ದೇಶಕ ಸಂತೋಷ್ ಕೊಡೆಂಕೆರಿ ಮಾಹಿತಿ ನೀಡಿದರು.

 

 

ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ರವಿಕೆ ಮೇಲೆ ಪ್ರೀತಿ. ಅದರ ಅಳತೆ ಸರಿಯಾಗಿರಬೇಕು ಎಂದು ಸಾಕಷ್ಟು ಸಲ ಟೈಲರ್ ಜೊತೆ ಚರ್ಚಿಸುತ್ತಾರೆ. ಈ ರೀತಿ ಮಹಿಳೆ ಹಾಗೂ ಟೈಲರ್ ನಡುವೆ ರವಿಕೆಗಾಗಿ ನಡಯುವ ಮುಖ್ಯ ವಿಷಯವೇ “ರವಿಕೆ ಪ್ರಸಂಗ” . ಸಂಭಾಷಣೆ ಮಂಗಳೂರು ಕನ್ನಡದಲ್ಲಿರುತ್ತದೆ. ಎಲ್ಲರ ಮನಸ್ಸಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಈ ಚಿತ್ರ ಪ್ರಿಯವಾಗಲಿದೆ ಎಂದರು ನಾಯಕಿ ಗೀತಾಭಾರತಿ ಭಟ್.

ನಾನು ಇಪ್ಪತ್ತೈದು ವರ್ಷಗಳ ನನ್ನ ಸಿನಿಮಾ ಜರ್ನಿಯಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ನನ್ನ ಮನಸ್ಸಿಗೆ ಹತ್ತಿತವಾದ ಚಿತ್ರಗಳು ಕೆಲವು ಮಾತ್ರ ಅದರಲ್ಲಿ ಈ ಚಿತ್ರ ಕೂಡ ಒಂದು ಎಂದರು ನಟಿ ಪದ್ಮಜಾರಾವ್.

ಕಥೆ ಹಾಗೂ ಸಂಭಾಷಣೆ ಬರೆದಿರುವ ಪಾವನ ಸಂತೋಷ್, ಛಾಯಾಗ್ರಹಕ ಮುರಳಿಧರ್ ಎನ್, ಸಂಗೀತ ನಿರ್ದೇಶಕ ವಿನಯ್ ಶರ್ಮ ಹಾಗೂ ಚಿತ್ರದಲ್ಲಿ ನಟಿಸಿರುವ ರಾಕೇಶ್ ಮಯ್ಯ, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

 

Spread the love
Click to comment

Copyright © 2019 PopcornKannada.com