Cinema News
ನೇಣು ಬಿಗಿದುಕೊಂಡು ಒಡಿಯಾ ಕಿರುತೆರೆ ನಟಿ ಸಾವು

ಭುವನೇಶ್ವರ: ಒಡಿಯಾ ಟಿವಿ ಧಾರಾವಾಹಿ ನಟಿ ರಶ್ಮಿರೇಖಾ ಓಜಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಶ್ಮಿರೇಖಾ ಓಜಾ ನಯಾಪಲ್ಲಿ ಪೊಲೀಸ್ ವ್ಯಾಪ್ತಿಯ ಗಡಸಾಹಿ ಪ್ರದೇಶದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೂನ್ 18ರ ರಾತ್ರಿ 10.30ರ ಸುಮಾರಿಗೆ ರಶ್ಮಿರೇಖಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಶವದ ಬಳಿ ಇದ್ದ ಮೇಜಿನ ಮೇಲೆ ಡೆತ್ ನೋಟ್ ಪತ್ತೆ ಆಗಿದ್ದು, ಇದರಲ್ಲಿರುವ ಕೈ ಬರಹ ನೋಡಿದರೆ ಇದು ನಟಿಯೇ ಬರೆದಿದ್ದಾರಾ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಡೆತ್ನೋಟ್ನಲ್ಲಿ ನನ್ನ ಸಾವಿಗೆ ಯಾರು ಹೊಣೆ ಅಲ್ಲ ಎಂದು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ರಶ್ಮಿರೇಖಾ ಕಳೆದ ಒಂದೂವರೆ ತಿಂಗಳಿನಿಂದ ಗೆಳೆಯನ ಜೊತೆ ಬಾಡಿಗೆ ಮನೆಯೊಂದರಲ್ಲಿ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಬೇರೆಡೆಗೆ ತೆರಳಿದ್ದು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದ ಎನ್ನಲಾಗಿದೆ. ಪೊಲೀಸರು ಎಲ್ಲಾ ಕೋನಗಳಿಂದಲೂ ಪ್ರಕರಣದ ತನಿಖೆ ಆರಂಭಿಸಿದ್ದು ರಶ್ಮಿರೇಖಾರ ಗೆಳೆಯನನ್ನು ವಿಚಾಣೆ ನಡೆಸಲಿದ್ದಾರೆ.
ಮೂಲತಃ ಜಗತ್ಸಿಂಗ್ಪುರ ಜಿಲ್ಲೆಯ ಸಂಕೇತ್ಪಟಾನಾದವರು ರಶ್ಮಿರೇಖಾ 12ನೇ ತರಗತಿಯ ನಂತರ ನಟನಾ ವೃತ್ತಿಗೆ ಎಂಟ್ರಿಕೊಟ್ಟಿದ್ದರು. ‘ಕೆಮಿತಿ ಕಹಿಬಿ ಕಹಾ’ ಧಾರಾವಾಹಿ ರಶ್ಮಿರೇಖಾ ಓಜಾ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.
