Cinema News
ಮಗುವಿನ ವಿಷಯಕ್ಕೆ ನಟ ಸತೀಶ್ ವಜ್ರನನ್ನು ಕೊಲೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು: ಆರ್ ಆರ್ ನಗರದ ಪಟ್ಟಣಗೆರೆಯಲ್ಲಿ ಯುವನಟ ಸತೀಶ್ ವಜ್ರ ಕೊಲೆ ಸಂಬಂಧ ಇದೀಗ ಪೊಲೀಸರು ಸಿಸಿಟಿವಿ ವಿಡಿಯೋ ಕಲೆ ಹಾಕಿದ್ದಾರೆ. ಕೊಲೆ ಮಾಡಲು ಮೊದಲೆ ಸ್ಕೆಚ್ ಹಾಕಿಕೊಂಡು ಬಂದಿದ್ದ ಆರೋಪಿಗಳು ಮಾರ್ಕೆಟ್ ಬಳಿ ಚಾಕು ಖರಿದಿಸಿರುವ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ಸತೀಶ್ ವಜ್ರ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಪಟ್ಟಣಗೆರೆಯ ಬಾಡಿಗೆ ಮನೆಯಲ್ಲಿ ಸತೀಶ್ ಒಬ್ಬರೇ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಸತೀಶ್ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದು, ಶನಿವಾರ ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಸತೀಶ್ ನನ್ನು ಕೊಲೆ ಮಾಡಿದ ಆತನ ಬಾಮೈದ ಸುದರ್ಶನ್, ಸಹಚರ ನಾಗೇಂದ್ರನನ್ನು ಬಂಧಿಸಿದ್ದಾರೆ.
ಸತೀಶ್ ಅವರ ಪತ್ನಿ ಸಾವನ್ನಪ್ಪಿದ ಬಳಿಕ ಪತ್ನಿಯ ಕುಟುಂಬ ಹಾಗೂ ಸತೀಶ್ ನಡುವೆ ಮಗುವಿನ ಪಾಲನೆ ಕುರಿತು ಜಗಳಗಳಾಗಿತ್ತು. ಸತೀಶ್ ಪತ್ನಿ ಪೋಷಕರು ಮಗುವನ್ನು ತಮಗೆ ಬಿಟ್ಟುಕೊಡುವಂತೆ ಕೇಳಿದ್ದು, ಇದಕ್ಕೆ ಸತೀಶ್ ಒಪ್ಪಿಲ್ಲ. ಇದೇ ವಿಚಾರವಾಗಿ ಬಾಮೈದ ಸುದರ್ಶನ್ ಹಾಗೂ ಸತೀಶ್ ಮಧ್ಯೆ ಗಲಾಟೆಗಳು ನಡೆದಿದ್ದವು.
ಬದುಕಿದ್ದಾಗ ಅಕ್ಕನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಈಗ ಮಗನಿಗಾಗಿ ತೊಂದರೆ ಕೊಡುತ್ತಿದ್ದಾನೆಂದು ಸುದರ್ಶನ್ ಕೆಂಡಾಮಂಡಲಗೊಂಡಿದ್ದ. ಇದರಂದೆ ಭಾವ ಸತೀಶ್ ಹತ್ಯೆಗೆ ನಿರ್ಧರಿಸಿದ್ದು, ಸುದರ್ಶನ್ ಅವರಿಗೆ ಸ್ನೇಹಿತ ನಾಗೇಂದ್ರ ಕೂಡ ಸಾಥ್ ನೀಡಿದ್ದಾರೆ.
ಅಂತೆಯೇ ಶುಕ್ರವಾರ ಬೆಂಗಳೂರಿಗೆ ಬಂದಿದ್ದ ದುಷ್ಕರ್ಮಿಗಳು ಬೆಂಗಳೂರಿನ ಮಾರ್ಕೆಟ್ ನಲ್ಲಿ ಚಾಕು ಖರೀದಿಸಿದ್ದಾರೆ. ಬಳಿಕ ರಾತ್ರಿ 11.13ರ ಸುಮಾರಿಗೆ ಸತೀಶ್ ಮನೆಗೆ ಹೋಗಿದ್ದ ಆರೋಪಿಗಳು ಸುಮ್ಮನೆ ಬಂದಿದ್ದಾಗಿ ಹೇಳಿದ್ದಾರೆ. ಬಳಿಕ 12.25ರ ವೇಳೆ ಕೊಲೆ ಮಾಡಿದ ದುಷ್ಕರ್ಮಿಗಳು ಬಳಿಕ ಎಸ್ಕೇಪ್ ಆಗಿದ್ದಾರೆ.
ಬರುವಾಗ ನಡೆದುಕೊಂಡೆ ಬಂದಿದ್ದ ಆರೋಪಿಗಳು ಕೊಲೆ ಮಾಡಿ ಎಸ್ಕೇಪ್ ಆಗುವಾಗ ಸತೀಶ್ ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಆರೋಪಿಗಳು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
