Cinema News
ಯುವ ಚಿತ್ರದ ಮೂಲಕ ಕನ್ನಡಕ್ಕೊಬ್ಬ ಖಡಕ್ ಯಂಗ್ ವಿಲನ್ ಆಗಮನ

ಕರ್ನಾಟಕದ ದೊಡ್ಮನೆ ಕುಡಿ ಯುವ ರಾಜ್ ಕುಮಾರ್ ಅಭಿನಯದ ಮೊದಲ ಸಿನೆಮಾ, ಹೊಂಬಾಳೆ ಪ್ರೊಡಕ್ಷನ್ ರವರ ಹೆಮ್ಮೆಯ ಕಾಣಿಕೆ, ಹಿಟ್ ನಿರ್ದೇಶಕ ಸಂತೋಷ್ ಆನಂದ್ರಾಮ್ ನಿರ್ದೇಶಿಸಿರುವ ಬಹು ನಿರೀಕ್ಷಿತ ಚಿತ್ರ ಯುವ ಮಾರ್ಚ್ 29ರಂದು ಕರ್ನಾಟಕದಾದ್ಯಂತ ತೆರೆಗೆ ಅಪ್ಪಳಿಸಿ ಕನ್ನಡಿಗರನ್ನು ಮೋಡಿ ಮಾಡುತ್ತಿದೆ. ಕುಟುಂಬ ಸಮೇತರಾಗಿ ಥಿಯೇಟರ್ ಗಳಿಗೆ ಲಗ್ಗೆ ಇಡುತ್ತಿರುವ ಪ್ರೇಕ್ಷಕರು ಸಿನೆಮಾವನ್ನು ಮನಸಾರೆ ಕೊಂಡಾಡುತ್ತಿದ್ದಾರೆ.

ಯುವ ಚಿತ್ರದ ಮೂಲಕ ಯುವ ರಾಜ್ ಕುಮಾರ್ ಒಬ್ಬ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ ಜೊತೆಗೆ ಇಲ್ಲೊಬ್ಬ ಯುವ ಕಲಾವಿದ ತನ್ನ ವಿಶಿಷ್ಟ ಅಭಿನಯ, ಹುರಿ ಕಟ್ಟಿದ ಮೈಕಟ್ಟು, ಆಕರ್ಷಕ ಹೇರ್ ಸ್ಟೈಲ್ ಮತ್ತು ಗೆಟಪ್ ಗಳೊಂದಿಗೆ ಯಂಗ್ ಅಂಡ್ ಕಡಕ್ ವಿಲ್ಲನ್ ಆಗಿ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಪರಿಚಯವಾಗಿದ್ದಾರೆ, ಹೆಸರು ರಣವ್ ಕ್ಷೀರಸಾಗರ್!

ಬೆಂಗಳೂರಿನ ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿ ದಂಪತಿಗಳ ಪುತ್ರ ರಣವ್ ಕ್ಷೀರಸಾಗರ್.
ಪುಟ್ಟ ಮಗುವಾಗಿದ್ದಾಗಿಂದಲೂ ಅಣ್ಣಾವ್ರು, ಶಿವಣ್ಣ, ರಾಘಣ್ಣ, ಅಪ್ಪು ಬಾಸ್ ಸಿನೆಮಾಗಳನ್ನು ನೋಡತ್ತಾ, ತಾನೂ ಸಿನೆಮಾದಲ್ಲಿ ಏನಾದರು ಸಾಧಿಸಬೇಕೆಂದು ಕನಸು ಕಟ್ಟಿಕೊಂಡಿದ್ದ ರಣವ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ ಮೇಲೆ ಹಲವಾರು ಸಿನೆಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಗಿಟ್ಟಿಸಿಕೊಂಡು ಅನುಭವ ಪಡೆಯುವುದರ ಜೊತೆಗೆ ನಟನೆ, ನೃತ್ಯ, ಸ್ಟಂಟ್, ಜಿಮ್ ತರಬೇತಿ ಪಡೆದು ಸಕಲ ರೀತಿಯಲ್ಲೂ ಸಿನೆಮಾಗೆ ತಯಾರಿ ತೆಗೆದುಕೊಂಡಿದ್ದಾರೆ.

ಹೀಗಿರುವಾಗ ಅದೊಂದು ದಿನ ರಣವ್ ಗೆ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಅಪ್ಪು ಜೊತೆ ನಟಿಸುವ ಅವಕಾಶ ಸಿಗುತ್ತದೆ. ಸಿಕ್ಕ ಅವಕಾಶವನ್ನು ಕಣ್ಣಿಗೆ ಒತ್ತಿಕೊಂಡು ಸಮರ್ಥವಾಗಿ ನಿಭಾಯಿಸಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ವಿಶ್ವಾಸವನ್ನು ಗಳಿಸಿಕೊಳ್ಳುತ್ತಾರೆ ರಣವ್. ಅದೆಲ್ಲದರ ಪ್ರತಿಫಲವೇ ಇಂದು ಯುವ ಚಿತ್ರದಲ್ಲಿ ಒಂದು ಬಹುಮುಖ್ಯ ವಿಲ್ಲನ್ ಪಾತ್ರದಲ್ಲಿ ಅಭಿನಯಿಸಿ ಕರ್ನಾಟಕದ ಮನೆ ಮಾತಾಗಿರುವ ರಣವ್ ಕ್ಷೀರಸಾಗರ್ ಗೆ ಕನ್ನಡ ಚಿತ್ರರಂಗದಲ್ಲಿ ಉಜ್ವಲವಾದ ಭವಿಷ್ಯವಿರುವುದಂತು ನಿಜ.
