Television News
ಮಂಗಳೂರು ವಿವಿ ಹಿಜಾಬ್ ವಿವಾದ; ನಿಯಮ ಪಾಲಿಸದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರಿಂದ ನೋಟಿಸ್

ಮಂಗಳೂರು: ವಿವಿ ಘಟಕ ಕಾಲೇಜಿನಲ್ಲಿ ಹಿಜಾಬ್ ಧರಿಸದಂತೆ ಸೂಚನೆ ನೀಡಿದ್ದರು ಇಂದೂ ಕೂಡ ಧರಿಸಿಕೊಂಡು ಬಂದಿದ್ದು, ನಿಯಮ ಪಾಲಿಸದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲೆ ನೋಟಿಸ್ ನೀಡಿದ್ದಾರೆ.
ಕಾಲೇಜಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ರೈ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾಲೇಜಿನ ಶಿಸ್ತು ಉಲ್ಲಂಘಿಸಿದ್ದು, ಘನತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಬಳಿಕವೂ ನಿಯಮ ಮೀರಿದರೆ ಅಮಾನತು ಮಾಡಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿರುವುದ್ದಾರೆ ಎನ್ನಲಾಗಿದೆ.
ಕಳೆದ ಕೆಲ ದಿನಗಳಿಂದ ಮಂಗಳೂರು ವಿವಿ ಘಟಕದ ಕಾಲೇಜಿನಲ್ಲಿ ನಿರ್ಬಂಧದ ನಡುವೆಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ತೆರಳಿದ್ದರು. ಹೀಗಾಗಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ತರಗತಿಗೆ ಹೋಗದಂತೆ ಪ್ರಾಂಶುಪಾಲೆ ಡಾ.ಅನುಸೂಯ ರೈ ತಡೆದಿದ್ದರು. ಅಲ್ಲದೆ ಜೂನ್ 4ರಂದು ಹಿಜಾಬ್ ಧರಿಸಿಕೊಂಡು ಬಂದಿದ್ದ 16 ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶವನ್ನು ನಿರಾಕರಿಸಲಾಗಿತ್ತು.
ಬಳಿಕ ಕೆಲ ವಿದ್ಯಾರ್ಥಿನಿಯರು ಈ ಬಗ್ಗೆ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ, ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್ ಧರಿಸಲು ಕೆಲವು ಉಪನ್ಯಾಸಕರು ಅನುಮತಿ ನೀಡುತ್ತಿದ್ದು ಮತ್ತೆ ಕೆಲವರು ಅನುಮತಿ ನೀಡುತ್ತಿಲ್ಲ. ತರಗತಿಯಲ್ಲಿ ಕೂರಲು ಅನುಮತಿ ನೀಡದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಲೈಬ್ರರಿ ಇಲ್ಲವೇ ಲೇಡೀಸ್ ರೂಮಿಗೆ ಹೋಗಿ ಕುಳಿತುಕೊಳ್ಳುತ್ತಿರೋದಾಗಿ ಹೇಳಿದ್ದರು. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ವಿದ್ಯಾರ್ಥಿನಿಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಜೊತೆಗೆ ಕಾಲೇಜಿನ ಹೆಚ್ ಒ ಡಿಗಳಿಗೂ ಮನವಿ ಮಾಡಿದ್ದರು. ಆದರೆ ಕಾಲೇಜಿನ ಪ್ರಿನ್ಸಿಪಾಲರು ಮಧ್ಯಪ್ರವೇಶಿಸಿ ಮನವಿಯನ್ನು ಸ್ವೀಕರಿಸಬಾರದು ಎಂದು ಹೇಳಿದ್ದಾಗಿ ವಿದ್ಯಾರ್ಥಿನಿಯರು ಆರೋಪಿಸಿದ್ದರು.
