Cinema News
ಆದಿವಾಸಿ ಮಕ್ಕಳೊಂದಿಗೆ ಹಂಸಲೇಖ ಹುಟ್ಟುಹಬ್ಬ: 10 ಮಕ್ಕಳಿಗೆ ಉಚಿತ ಸಂಗೀತ ಕಲಿಸಲು ನಾದ ಬ್ರಹ್ಮ ಸಂಕಲ್ಪ

ನಿನ್ನೆ ನಾದ ಬ್ರಹ್ಮ ಹಂಸಲೇಖ ಅವರ 71ನೇ ಹುಟ್ಟುಹಬ್ಬ. ತಮ್ಮ ಹುಟ್ಟುಹಬ್ಬವನ್ನು ಹೆಚ್ ಡಿ ಕೋಟೆ ತಾಲೂಕಿ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಲಾಪುರ ಹಾಡಿನಲ್ಲಿ ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಹಂಸಲೇಖ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.
ಹಂಸಲೇಖ ಅದೆಷ್ಟೋ ಬಡ ಮಕ್ಕಳಿಗೆ ಉಚಿತವಾಗಿ ಸಂಗೀತ ನೀಡಿದ್ದಾರೆ. ಕಷ್ಟ ಎಂದವರಿಗೆ ಕೈಲಾದ ಸಹಾಯ ಮಾಡಿದ್ದಾರೆ. ಅಂತೆಯೇ ತಮ್ಮ ಹುಟ್ಟುಹಬ್ಬವನ್ನು ಮತ್ತಷ್ಟು ಹೆಚ್ಚಿಸಲು ಬೊಮ್ಮಲಾಪುರ ಹಾಡಿಯಲ್ಲಿನ್ನ 10 ಆದಿವಾಸಿ ಮಕ್ಕಳಿಗೆ ಉಚಿತವಾಗಿ ಸಂಗೀತ ಅಭ್ಯಾಸ ಹೇಳಿಕೊಡುವ ಸಂಕಲ್ಪ ಮಾಡಿದ್ದಾರೆ.
ಹಾಡಿನಲ್ಲಿನ ಮಕ್ಕಳೊಂದಿಗೆ ಹಾಡಿ ನಲಿದು ಹುಟ್ಟುಹಬ್ಬ ಆಚರಿಸಿಕೊಂಡ ಹಂಸಲೇಖ ಹತ್ತು ಮಕ್ಕಳಿಗೆ ತಮ್ಮ ಸಂಗೀತ ಶಾಲೆಯಲ್ಲಿ ಉಚಿತವಾಗಿ ಸಂಗೀತ ಶಿಕ್ಷಣ ಕೊಡಿಸುವುದಾಗಿ ಹೇಳಿದರು. ಪತ್ನಿಯೊಂದಿಗೆ ಬೊಮ್ಮಲಾಪುರ ಹಾಡಿಗೆ ಬಂದು ಹುಟ್ಟುಹಬ್ಬ ಆಚರಿಸಿಕೊಂಡ ಹಂಸಲೇಖ ಆದಿವಾಸಿ ಕುಟುಂಬಗಳು ತಯಾರಿಸಿದ್ದ ಅಡುಗೆಯನ್ನು ಸವಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಹಂಸಲೇಖ ಬೆಂಗಳೂರಿನಲ್ಲಿ ದೇಸಿ ಸಂಸ್ಥೆಯನ್ನು ನಡೆಸುತ್ತಿದ್ದು, ಈ ಸಂಸ್ಥೆಯ ಮೂಲಕವೇ ಆದಿವಾಸಿ ಮಕ್ಕಳಿಗೆ ಉಚಿತವಾಗಿ ಸಂಗೀತ ಶಿಕ್ಷಣದ ಜೊತೆಗೆ ಕಲಿಯಲು ಬೇಕಾಗುವ ಸಂಗೀತ ಉಪಕರಣಗಳನ್ನು ಮತ್ತು ಟ್ಯಾಬ್ಲೆಟ್ ಕೂಡ ಕೊಡುವುದಾಗಿ ಹೇಳಿದ್ದಾರೆ. ಬೇರೆ ಮಕ್ಕಳಿಗೆ ಸಂಗೀತ ಕಲಿಯುವ ಆಸಕ್ತಿ ಇದ್ದರೆ ಆನ್ ಲೈನ್ ಮೂಲಕವೂ ಉಚಿತವಾಗಿ ಕಲಿಯಲು ಏರ್ಪಾಟು ಮಾಡಿದ್ದಾರಂತೆ.
