Cinema News
ಗುಡಿಸಲಿನಿಂದ ಯಶಸ್ಸಿನ ಶಿಖರವರೆಗೆ; ಬಿ.ಕೆ.ಶ್ರೀನಿವಾಸ್ ಹೋರಾಟದ ಕಥೆ ಪುಸ್ತಕ ಬಿಡುಗಡೆ

ಗಾಂಧಿ ಭವನದಲ್ಲಿ ನಿರ್ಮಾಪಕ ಬಿ.ಕೆ.ಶ್ರೀನಿವಾಸ್ (ಬೆಂ.ಕೋ.ಶ್ರೀ) ಅವರ ಜೀವನ ಪಯಣವನ್ನು ಒಳಗೊಂಡ ‘ಬಿ.ಕೆ.ಶ್ರೀನಿವಾಸ್ ಒಂದು ಅಸಾಮಾನ್ಯ ಜೀವನಯಾನ’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಸಿನಿಮಾ, ವ್ಯಾಪಾರ, ಹೋರಾಟ ಹಾಗೂ ಅಜೇಯ ಮನೋಬಲದ ಮೂಲಕ ಅವರು ಸಾಗಿದ ಯಶೋಗಾಥೆಯನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.
ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಸಾ.ರಾ.ಗೋವಿಂದು, ಪತ್ರಕರ್ತ ಜೋಗಿ, ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಕೋಶ್ರೀ, ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡರು. ಬಡ ಕುಟುಂಬದಲ್ಲಿ ಹುಟ್ಟಿ, ಗುಡಿಸಲಿನಲ್ಲಿ ಜೀವನ ಆರಂಭಿಸಿದ ತಾವು ಕೇವಲ 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾಗಿ ಹೇಳಿದರು. ಸಿನಿಮಾ ಮೇಲಿನ ಆಸಕ್ತಿಯಿಂದ ಹಲವು ಏಳು-ಬೀಳುಗಳನ್ನು ಎದುರಿಸಿದ್ದರೂ ತಮ್ಮ ಕನಸಿನ ಹಾದಿಯನ್ನು ಮುಂದುವರಿಸಿದ ಬಗ್ಗೆ ಅವರು ಹಂಚಿಕೊಂಡರು.

ಪತ್ರಕರ್ತ ಜೋಗಿ ಮಾತನಾಡಿ, ಬೆಂಕೋಶ್ರೀ ಅವರಿಗೆ ಸಿನಿಮಾ ಮೇಲಿನ ಪ್ರೀತಿ ಹಾಗೂ ಒಳ್ಳೆಯ ಚಿತ್ರಗಳನ್ನು ಮಾಡುವ ಉತ್ಸಾಹ ದೊಡ್ಡದು ಎಂದರು. ಸಾ.ರಾ.ಗೋವಿಂದು ಮಾತನಾಡಿ, ಅವರ ಹೋರಾಟದ ದಿನಗಳಿಂದಲೇ ದೊಡ್ಡ ಸಾಧನೆ ಮಾಡುತ್ತಾರೆ ಎಂಬ ನಂಬಿಕೆ ಇತ್ತು ಎಂದು ಹೇಳಿದರು. ಜಾಹ್ನವಿ ಕೂಡ ಬೆಂಕೋಶ್ರೀ ಅವರ ಜೀವನ ಎಲ್ಲರಿಗೂ ಪ್ರೇರಣೆ ಎಂದು ಶ್ಲಾಘಿಸಿದರು. ಕೊನೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು
