Cinema News
ಹೊಂಬಾಳೆ ಕಚೇರಿಯಲ್ಲಿ ಕಾಣಿಸಿಕೊಂಡ ಮಾಜಿ ಮಿಸ್ ವರ್ಲ್ಡ್: ಕುತೂಹಲ ಮೂಡಿಸಿದ ವಿಜಯ್, ಮಾನುಷಿ ಭೇಟಿ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಗ್ರ್ಯಾಂಡ್ ಸಕ್ಸಸ್ ಬಳಿಕ ಹೊಂಬಾಳೆ ಫಿಲ್ಮ್ ಇತರ ಭಾಷೆಯಲ್ಲೂ ಸದ್ದು ಮಾಡ್ತಿದೆ. ಈಗಾಗ್ಲೆ ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಇದೀಗ ಮತ್ತೊಂದು ಅಚ್ಚರಿಯನ್ನು ನೀಡಿದೆ.
ಇತ್ತೀಚೆಗೆ ನಟಿ ಮಾನುಷಿ ಚಿಲ್ಲರ್ ಹೊಂಬಾಳೆ ಕಚೇರಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮಾನುಷಿ ಚಿಲ್ಲರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ತೆರೆ ಕಂಡಿತ್ತು. ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡದೇ ಇದ್ದರೂ, ಮಾನುಷಿ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಬೆಂಗಳೂರಿಗೆ ಆಗಮಿಸಿರುವ ಮಾನುಷಿ, ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ ಮಾಡಿದ್ದು, ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
ಹೊಂಬಾಳೆ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ಮಾನುಷಿ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಪ್ರಶ್ನೆ ಶುರುವಾಗಿದೆ. ಸದ್ಯ ಹೊಂಬಾಳೆ ಫಿಲ್ಮ್ಸ್ ಎರಡು ಮೆಗಾ ಪ್ರಾಜೆಕ್ಟ್ ನಿರ್ಮಾಣ ಮಾಡುತ್ತಿದೆ. ಒಂದು ಸಿನಿಮಾವನ್ನು ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡುತ್ತಿದ್ರೆ, ಮತ್ತೊಂದು ಸಿನಿಮಾ ಬಾಲಿವುಡ್ ನಲ್ಲಿ ಮಾತುಕತೆ ನಡೆದಿದೆ. ಈ ಎರಡು ಸಿನಿಮಾದಲ್ಲಿ ಯಾವುದಾದರೂ ಒಂದು ಸಿನಿಮಾದಲ್ಲಿ ಮಾನುಷಿ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಒಟ್ಟಿನಲ್ಲಿ ಮಾನುಷಿ ಬೆಂಗಳೂರು ಆಫೀಸಿನಲ್ಲಿ ವಿಜಯ್ ಕಿರಗಂದೂರು ಅವರನ್ನು ಭೇಟಿ ಮಾಡಿದ ಫೋಟೋವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹೊಂಬಾಳಿ ಫಿಲ್ಮ್ಸ್ ಪೋಸ್ಟ್ ಮಾಡಿ ಕುತೂಹಲ ಮೂಡಿಸಿದೆ.
