Cinema News
ಮತ್ತೊಮ್ಮೆ ಸೆಂಚುರೀ ಬಾರಿಸಿದ ಎ.ಪಿ ಅರ್ಜುನ್
 
																								
												
												
											 
2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ ಕಿಸ್ ಸಿನಿಮಾ ಕೂಡಾ ಒಂದು. ಆದರೆ ‘ಕಿಸ್’ ಸಿನಿಮಾ ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದೂ ದೊಡ್ಡ ಮಟ್ಟದಲ್ಲಿ ಗೆದ್ದಿದೆ ಅನ್ನೋದು ವಿಶೇಷ.
ಇವತ್ತಿನ ದಿನಗಳಲ್ಲಿ ಚಿತ್ರ ಪ್ರೇಕ್ಷಕರನ್ನು ಸಿನಿಮಾ ಚನ್ನಾಗಿದೆ ನೋಡಬನ್ನಿ ಅಂದ ಕೂಡಲೇ ಅವರು ಬಂದು ಕೂರೋದಿಲ್ಲ. ಹಂತ ಹಂತವಾಗಿ ರುಚಿ ಹತ್ತಿಸಿ, ಈ ಸಿನಿಮಾವನ್ನು ನೋಡಲೇಬೇಕು ಅಂತಾ ಅನ್ನಿಸೋ ಮಟ್ಟಿಗೆ ತಯಾರು ಮಾಡಬೇಕು. ಆಗ ರೆಗ್ಯುಲರ್ ಆಗಿ ಥಿಯೇಟರಿಗೆ ಬರುವವರು ಆಗಮಿಸುತ್ತಾರೆ. ಅವರು ಇಷ್ಟಪಟ್ಟಮೇಲೇನೆ ಸ್ಟೂಡೆಂಟ್ಸ್ ಮತ್ತು ಫ್ಯಾಮಿಲಿ ಆಡಿಯನ್ಸು ಥಿಯೇಟರಿನತ್ತ ಸುಳಿಯೋದು. ಈ ಸೂತ್ರ ತಿಳಿದ ನಿರ್ದೇಶಕರಿಗೆ ಮಾತ್ರ ಉತ್ತಮ ಸಿನಿಮಾವನ್ನೂ ಕೊಟ್ಟು, ಜನರನ್ನು ಮೆಚ್ಚಿಸುವ ತಂತ್ರ ಗೊತ್ತಿರುತ್ತದೆ.

ಈ ನಿಟ್ಟಿನಲ್ಲಿ ನೋಡಿದರೆ ನಿರ್ದೇಶಕ ಎ.ಪಿ. ಅರ್ಜುನ್ ಪಕ್ಕಾ ಕಸುಬುದಾರ ನಿರ್ದೇಶಕ. ಇವರಿಗೆ ಯಾವ ಸಂದರ್ಭದಲ್ಲಿ ಎಂಥಾ ಚಿತ್ರ ಮಾಡಬೇಕು? ಟ್ರೆಂಡ್ ಹುಟ್ಟುಹಾಕುವಂಥಾ ಟ್ಯೂನುಗಳನ್ನು ಹೆಕ್ಕೋದು ಹೇಗೆ? ಅದನ್ನು ತೀರಾ ಹೊಸದೆನ್ನುವಂತೆ ದೃಶ್ಯರೂಪದಲ್ಲಿ ಕಟ್ಟಿಕೊಡುವ ಬಗೆ ಯಾವುದು? ಅನ್ನೋದು ಕರಾರುವಕ್ಕಾಗಿ ತಿಳಿದಿದೆ. ಮುಖ್ಯವಾಗಿ ಕಾಲೇಜು ಹುಡುಗ ಹುಡುಗಿಯರನ್ನು ಸೆಳೆಯುವ ಮಾಂತ್ರಿಕ ವಿದ್ಯೆ ಅರ್ಜುನ್ ಅವರಿಗೆ ಸಿದ್ಧಿಸಿದೆ. ಇವರ ಆರಂಭದ ಸಿನಿಮಾ ಅಂಬಾರಿಯಿಂದ ಹಿಡಿದು ಇವತ್ತಿನ ಕಿಸ್ ತನಕ ಮೊದ ಮೊದಲಿಗೆ ಕೈ ಹಿಡಿಸು ಗೆಲ್ಲಿಸಿದ್ದೇ ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳಾ ಪ್ರೇಕ್ಷಕರು.
ಕಿಸ್ ಸಿನಿಮಾವನ್ನು ನೋಡಿದವರಲ್ಲಿ ಕೂಡಾ ಅತಿ ಹೆಚ್ಚು ಜನ ಇದೇ ವರ್ಗಕ್ಕೆ ಸೇರಿದವರೇ. ನೀನೆ ಮೊದಲು ನೇನೇ ಕೊನೆ ಅನ್ನೋ ಹಾಡೊಂದು ಎಳೇ ಹುಡುಗರ ಎದೆಗೆ ಬಾಣದಂತೆ ನಾಟಿಕೊಂಡಿತ್ತು. ಶೀಲ ಸುಶೀಲ ಹಾಡನ್ನು ತೆರೆ ಮೇಲೆ ಯಾವಾಗ ನೋಡ್ತೀವೋ ಅಂತಾ ಪಡ್ಡೆ ಹುಡುಗರು ಮೈ ಕುಣಿಸಿಕೊಂಡು ಕಾಯುತ್ತಿದ್ದರು. ನಿರೀಕ್ಷೆಯಂತೇ ಚಿತ್ರ ಥಿಯೇಟರಿಗೆ ಬಂದ ಕೂಡಲೇ ನುಗ್ಗಿ ನೋಡಿದರು. ಈ ಎಲ್ಲದರ ಪ್ರತಿಫಲವೆನ್ನುವಂತೆ ಕಿಸ್ ಈಗ ನೂರು ದಿನಗಳನ ಸಂಭ್ರಮವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಹಾಗೂ ಮೊದಲ ಬಾರಿ ನಿರ್ಮಾಣ ಮಾಡಿರುವ ಎ.ಪಿ.ಅರ್ಜುನ್ ಸಿನಿಮಾಕ್ಕೆ ದುಡಿದವರಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ತಾತನಾಗಿ ಕಾಣಿಸಿಕೊಂಡಿರುವ ದತ್ತಣ್ಣ ಒಂದಷ್ಟು ಮಂದಿಗೆ ಫಲಕಗಳನ್ನು ವಿತರಣೆ ಮಾಡಿದರು. ನಂತರ ಮಾತನಾಡುತ್ತಾ ಇಬ್ಬರು ಹೊಸಬರನ್ನು ಇಟ್ಟುಕೊಂಡು 100 ದಿವಸ ಆಟವಾಡಿಸಿದ್ದಾರೆ. ರಾಜಕುಮಾರ, ಯಜಮಾನ, ಈಗ ಕಿಸ್ ನೂರು ದಿನ ಕಂಡಿದೆ. ಮೂರರಲ್ಲೂ ಕೆಲಸ ಮಾಡಿದ್ದೇನೆಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಬಹುಶ: ನಾನಿರುವ ಚಿತ್ರಗಳು ಶತದಿನ ಕಾಣುತ್ತವೆ ಎಂದರು.

ಪ್ರತಿಯೊಬ್ಬ ನಿರ್ಮಾಪಕರಿಗೂ ನೂರು ದಿವಸ ಪ್ರದರ್ಶನ ಕಾಣುವ ಚಿತ್ರ ಮಾಡಬೇಕೆಂಬ ಬಯಕೆ ಇರುತ್ತದೆ. ನಾವು ಕಷ್ಟಪಟ್ಟು ಪ್ರೀತಿಯಿಂದ ಮಾಡಿದ್ದನ್ನು ಜನರು ಮುತ್ತು ಕೊಟ್ಟು ಇಲ್ಲಿಯವರೆಗೂ ತಂದು ನಿಲ್ಲಿಸಿದ್ದಾರೆ. ನಿರ್ದೇಶಕ ನಿರ್ಮಾಪಕ ಆದಾಗ ಅದರ ಕಷ್ಟ ಏನೆಂದು ತಿಳಿದುಕೊಂಡೆ. ಆ ಸ್ಥಾನಕ್ಕೆ ಬಂದ ಸಮಯದಲ್ಲಿ ಖಾತೆಯಲ್ಲಿ ಕೇವಲ ರೂ.268 ಇತ್ತು. ಹಾಗೂ ಹೀಗೂ ಗೆಳೆಯರು, ಹಿತೈಷಿಗಳು ನನಗೆ ಒಳ್ಳೆಯದಾಗಲೆಂದು ಸಹಾಯ ಮಾಡಿದ್ದರಿಂದಲೇ ಒಂದೂವರೆ ಕೋಟಿ ಸಂದಾಯವಾಯಿತು. ಇದರಲ್ಲಿ ಚಿಕ್ಕಣ್ಣನ ಪಾಲೂ ಇದೆ. ಪ್ರತಿಯೊಬ್ಬರು ನಿರ್ಮಾಪಕರಾಗಿದ್ದರೂ ಪೋಸ್ಟರ್ನಲ್ಲಿ ನನ್ನ ಹೆಸರು ಮಾತ್ರ ಇದೆ ಅಷ್ಟೇ. ಸೆಟ್ ಬಾಯ್ನಿಂದ ಹಿಡಿದು ಕಲಾವಿದರು, ಪ್ರಚಾರಕರ್ತರು, ಮಾದ್ಯಮಗಳ ಸಹಕಾರದಿಂದಲೇ ಯಶಸ್ಸು ಸಿಕ್ಕಿದೆ. ಹರಿಕೃಷ್ಣ ಸಂಗೀತದಲ್ಲಿ ಒಳ್ಳೆಯ ಹಾಡುಗಳು ಇರುವುದು ಪ್ಲಸ್ ಪಾಯಿಂಟ್ ಆಗಿತ್ತು. ಇದರಲ್ಲಿ ಒಂದು ಹಾಡಿಗೆ ಅವರ ಮಗ ಆದಿ ಹರಿಕೃಷ್ಣ ಕೇವಲ ಹತ್ತು ನಿಮಿಷದಲ್ಲಿ ರಾಗ ಸಂಯೋಜಿಸಿದ್ದು, ಸೂಪರ್ ಹಿಟ್ಆಗಿದೆ. ಅವನಿಗೆ ಉಜ್ವಲ ಭವಿಷ್ಯವಿದೆ ಎನ್ನುತ್ತಾ ಅರ್ಜುನ್ ಮಾತಿಗೆ ವಿರಾಮ ಹಾಕಿದರು.
 
 
																	
																															 
			 
											 
											 
											 
											 
											 
											 
											 
											