Cinema News
ಸುಳ್ಳು ಸುದ್ದಿಯಿಂದ ಬೇಸರವಾಗಿದೆ: ಧೃವ್ ವಿಕ್ರಂ

ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಕಂಗಾಲಾಗಿದ್ದರು. ನಿನ್ನೆ ಮಧ್ಯಾಹ್ನ ಏಕಾ ಏಕಿ ವಿಕ್ರಂ ಅವರನ್ನು ಆಸ್ಪತ್ರೆಗೆ ದಾಖಲಾಗಿಸಿದ್ದ ವಿಷಯ ಕೇಳಿ ಶಾಕ್ ಆಗಿದ್ರು. ನಟನ ಆರೋಗ್ಯದ ಬಗ್ಗೆ ಈಗಾಗ್ಲೆ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದು ಇದೀಗ ವಿಕ್ರಂ ಪುತ್ರ ಧೃವ್ ತಂದೆಯ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ.
ಚೆನ್ನೈನ ಕಾವೇರಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು ವಿಕ್ರಂ ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಹೊರತು ಹೃದಯಾಘಾತವಾಗಿಲ್ಲ ಎಂದಿದ್ದರು. ಜೊತೆಗೆ ವಿಕ್ರಮ್ ಮ್ಯಾನೇಜರ್ ಸೂರ್ಯ ನಾರಾಯಣ್ ಈ ಬಗ್ಗೆ ಟ್ವಿಟ್ ಮಾಡಿ ವಿಕ್ರಂ ಅವರಿಗೆ ಚೆಸ್ಟ್ ಡಿಸ್ ಕಂಫರ್ಟ್ ಆಗಿತ್ತು ಅಷ್ಟೇ. ಹಾರ್ಟ್ ಅಟ್ಯಾಕ್ ಆಗಿದೆ ಅನ್ನೋದು ಸುಳ್ಳು ಸುದ್ದಿ. ವಿಕ್ರಮ್ ಅವರ ಆರೋಗ್ಯ ಸ್ಥಿರವಾಗಿದ್ದು ಒಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದ್ದರು.
ಇದೀಗ ವಿಕ್ರಂ ಪುತ್ರ ಧೃವ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ, ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದು, ತಂದೆಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

”ಪ್ರೀತಿಯ ಅಭಿಮಾನಿಗಳೇ, ಅಪ್ಪನಿಗೆ ಸಣ್ಣ ಮಟ್ಟಿನ ಎದೆನೋವು ಕಾಣಿಸಿಕೊಂಡಿತ್ತು, ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗಿದೆ. ಕೆಲವು ಸುಳ್ಳು ಸುದ್ದಿಗಳು ಹರಿದಾಡುತ್ತಿರುವಂತೆ ಅವರಿಗೆ ಹೃದಯಾಘಾತ ಆಗಿಲ್ಲ. ಈ ರೀತಿಯ ಸುಳ್ಳು ಸುದ್ದಿಗಳು ಕೇಳಿ ನಮಗೆ ತೀವ್ರ ಬೇಸರವಾಗಿದೆ” ಎಂದು ಬರೆದುಕೊಂಡಿದ್ದಾರೆ.
”ಈ ಸಮಯದಲ್ಲಿ ಅವರಿಗೆ ಹಾಗೂ ನಮ್ಮ ಕುಟುಂಬಕ್ಕೆ ಖಾಸಗಿತನದ ಅವಶ್ಯಕತೆ ಇದೆ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ. ಚಿಯಾನ್ ವಿಕ್ರಂ ಈಗ ಆರಾಮವಾಗಿದ್ದಾರೆ, ಅವರು ಇನ್ನೊಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ನನ್ನ ಈ ಹೇಳಿಕೆಯು ಎಲ್ಲ ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದೆ ಎಂದುಕೊಂಡಿದ್ದೇನೆ” ಎಂದು ಧೃವ್ ಟ್ವೀಟ್ ಮಾಡುವ ಮೂಲಕ ತಂದೆಯ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.
