Television News
ಬಿಜೆಪಿ ಭರ್ಜರಿ ಗೆಲುವು: ಬೊಮ್ಮಾಯಿಗೆ ಮೋದಿ ಅಭಿನಂದನೆ

ಬೆಂಗಳೂರು: ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 4 ಸ್ಥಾನಗಳ ಪೈಕಿ ಮೂರು ಸ್ಥಾನ ಗೆದ್ದಿರುವ ಕಮಲ ಪಡೆ ಗೆಲುವಿನ ನಗೆ ಬೀರಿದೆ. ಗೆಲುವಿನ ಖುಷಿಯಲ್ಲಿರೋ ಸಿಎಂ ಬೊಮ್ಮಾಯಿ ಅವರಿಗೆ ಪ್ರಧಾನಿ ಮೋದಿ ಕರೆ ಮಾಡಿ ಶುಭ ಹಾರೈಸಿದ್ದಾರೆ. ಮೋದಿ ಕರೆ ಬಿಜೆಪಿ ವಲಯದಲ್ಲಿ ಮತ್ತಷ್ಟು ಖುಷಿಗೆ ಕಾರಣವಾಗಿದೆ.
ಮೋದಿಯವರ ಕರೆ ಬರುತ್ತಿದ್ದಂತೆ ಬೊಮ್ಮಾಯಿ ಅವರು ಕರೆಯನ್ನು ಬಿ. ಎಸ್.ಯಡಿಯೂರಪ್ಪ ಅವರಿಗೆ ನೀಡಲು ಮುಂದಾದರು. ಆದರೆ ಯಡಿಯೂರಪ್ಪ ಅವರು, ನೀವೇ ಮಾತನಾಡಿ ಎಂದು ಬೊಮ್ಮಾಯಿ ಅವರ ಬೆನ್ನು ತಟ್ಟಿದರು. ಬಳಿಕ ಮಾತನಾಡಿದ ಬೊಮ್ಮಾಯಿ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಧಾನಿ ಮೋದಿ, ಅಧ್ಯಕ್ಷರಾದ ಜೆ.ಪಿ.ನಡ್ಡಾ, ನಳಿನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ. ರಾಜ್ಯದ ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಧನ್ಯವಾದ ಎಂದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಮೇಲ್ಮನೆ ಪ್ರವೇಶ ಮಾಡಿದ್ದಾರೆ. ಗೆಲುವಿನ ಸಂಭ್ರಮದಲ್ಲಿರೋ ನಿರ್ಮಲಾ ಸೀತರಾಮನ್ ಮಾತನಾಡಿ, ರಾಜ್ಯ ಬಿಜೆಪಿ ನಾಯಕರಿಗೆ ಧನ್ಯವಾದ. ಅಲ್ಲದೇ ಎರಡನೇ ಬಾರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಈ ನಾಡಿನ ಜನರಿಗೂ ಧನ್ಯವಾದ ಎಂದರು.
ಮೇಲ್ಮನೆ ಪ್ರವೇಶಿಸಿದ ನಟ ಜಗ್ಗೇಶ್ ಮಾತನಾಡಿ , ಗೆಲುವಿನ ಸಹಕರಿಸಿದ ತಮ್ಮ ಪಕ್ಷದ ಎಲ್ಲಾ ಶಾಸಕ ಮಿತ್ರರಿಗೆ ಧನ್ಯವಾದ ತಿಳಿಸಿದ್ರು. ಅಲ್ಲದೆ ಇಡೀ ಗೆಲುವನ್ನು ರಾಯರಿಗೆ ಅರ್ಪಿಸಿದ್ರು. ಇನ್ನೂ ಮೂರನೆ ಅಭ್ಯರ್ಥಿ ಲೆಹರ್ ಸಿಂಗ್ ತಮ್ಮ ಗೆಲುವಿನ ಸಂಭ್ರಮ ಹಂಚಿಕೊಂಡಿದ್ದು, ನನಗೆ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿತ್ತು. ದೇವರ ಕೃಪೆಯಿಂದ ಗೆದ್ದಿದ್ದೇನೆ ಎಂದರು.
