Television News
ರಾಜ್ಯಸಭಾ ಚುನಾವಣೆ: ಮಹಾರಾಷ್ಟ್ರ, ಹರ್ಯಾಣಗಳಲ್ಲಿ ಮಧ್ಯರಾತ್ರಿಯಿಂದಲೇ ಮತ ಎಣಿಕೆ ಆರಂಭ

ನವದೆಹಲಿ: ನಿಯಮ ಉಲ್ಲಂಘನೆಯಾಗಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಚೂನಾವಣಾ ಆಯೋಗ ಜೂ 10ರಂದು ಮಧ್ಯರಾತ್ರಿ ಹರ್ಯಾಣ ಹಾಗೂ ಮಹಾರಾಷ್ಟ್ರದ ರಾಜ್ಯಸಭೆ ಚುನಾವಣಾ ರಿಟರ್ನಿಂಗ್ ಅಧಿಕಾರಿಗಳಿಗೆ ಮತ ಎಣಿಕೆ ಮುಂದುವರೆಸುವಂತೆ ನಿರ್ದೇಶನ ನೀಡಿದೆ.
ಇದೇ ವೇಳೆ ಶಿವಸೇನೆಯ ಶಾಸಕ ಸುಹಾಸ್ ಕಾಂಡೆ ಅವರ ಮತವನ್ನು ತಿರಸ್ಕರಿಸಲು ಚುನಾವಣಾ ಆಯೋಗ ಮಹಾರಾಷ್ಟ್ರದ ರಿಟರ್ನಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆರೋಪಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ಅಧಿಕಾರಿಗಳು ನೀಡಿದ್ದ ವಿಡಿಯೋ ಫುಟೇಜ್ ಹಾಗೂ ವರದಿಯನ್ನು ಗಮನಿಸಿದ ಬಳಿಕ ಚುನಾವಣಾ ಆಯೋಗ ಜೂ 10ರಂದು ಮಧ್ಯರಾತ್ರಿಯೇ ಮತ ಎಣಿಗೆ ಮುಂದುವರೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷ ಆಡಳಿತಾರೂಢ ಎಂವಿಎ ಸಚಿವರಾದ ಜಿತೇಂದ್ರ ಅವ್ಹಾಡ್ (ಎನ್ ಸಿಪಿ) ಯಶೋಮತಿ ಠಾಕೂರ್ (ಕಾಂಗ್ರೆಸ್) ಶಿವಸೇನೆ ಶಾಸಕ ಸುಹಾಸ್ ಕಂಡೆ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಮತ ಎಣಿಕೆ ವಿಳಂಬವಾಗಿತ್ತು.
ಅವ್ಹಾಡ್ ಹಾಗೂ ಠಾಕೂರ್ ಇಬ್ಬರೂ ಅಕ್ರಮವಾಗಿ ತಮ್ಮ ಬ್ಯಾಲಟ್ ಗಳನ್ನು ಪಕ್ಷದ ಏಜೆಂಟ್ ಗಳಿಗೆ ಹಸ್ತಾಂತರಿಸಿದ್ದರು, ಕಂಡೆ ಎಂಬಾತ ಇಬ್ಬರು ಏಜೆಂಟ್ ಗಳಿಗೆ ಬ್ಯಾಲಟ್ ತೋರಿಸಿದ್ದರು ಎಂಬುದು ಬಿಜೆಪಿಯ ಆರೋಪವಾಗಿತ್ತು. ಇದೇ ರೀತಿಯ ಕಾರಣಗಳಿಂದಾಗಿ ಹರ್ಯಾಣದಲ್ಲೂ ಮತ ಎಣಿಕೆಗೆ ತಾತ್ಕಾಲಿತ ತಡೆ ನೀಡಲಾಗಿತ್ತು.
