Cinema News
ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಬೃಂದಾವಿಹಾರಿ’ ಬಿಡುಗಡೆ ದಿನಾಂಕ ಘೋಷಣೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ “ಬೃಂದಾವಿಹಾರಿ” ಚಿತ್ರ ಇದೇ ಅಕ್ಟೋಬರ್ 16ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಗಣೇಶ್ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಚಿತ್ರತಂಡ ಹೊಸ ಪೋಸ್ಟರ್ ಅನಾವರಣಗೊಳಿಸಿ, ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ವಿಶೇಷ ಉಡುಗೊರೆಯಿಂದ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.
ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಅವರ ಭವ್ಯ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಶ್ರೀನಿವಾಸರಾಜು ನಿರ್ದೇಶಿಸಿದ್ದಾರೆ. ಈ ಹಿಂದೆ ಗಣೇಶ್ ಹಾಗೂ ಶ್ರೀನಿವಾಸರಾಜು ಕಾಂಬಿನೇಶನ್ನಲ್ಲಿ ಬಂದ ‘ಕೃಷ್ಣಂ ಪ್ರಣಯ ಸಖಿ’ ದೊಡ್ಡ ಯಶಸ್ಸು ಕಂಡಿದ್ದರಿಂದ, ಅವರ ಮತ್ತೊಂದು ಚಿತ್ರವಾದ ‘ಬೃಂದಾವಿಹಾರಿ’ ಮೇಲೂ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿದೆ.

ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಂಗೀತಪ್ರಿಯರ ಮೆಚ್ಚುಗೆ ಗಳಿಸಿವೆ. ಮಧುರ ಸಂಗೀತ, ಆಕರ್ಷಕ ದೃಶ್ಯಗಳು ಮತ್ತು ಮನರಂಜನೆಯ ಅಂಶಗಳೊಂದಿಗೆ ಚಿತ್ರವು ಪ್ರೇಕ್ಷಕರನ್ನು ಸೆಳೆಯಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ಹೊಂದಿದೆ. ಗಣೇಶ್ ಅವರ ಅಭಿಮಾನಿಗಳು ಕೂಡ ಚಿತ್ರವನ್ನು ದೊಡ್ಡ ಪರದೆಯಲ್ಲಿ ನೋಡುವುದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ ನೀಡಿದ್ದು, ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣವಿದೆ. ಗಣೇಶ್ಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ಅಭಿನಯಿಸಿದ್ದು, ಈ ತಾರಾಗಣದೊಂದಿಗೆ “ಬೃಂದಾವಿಹಾರಿ” ದಸರಾ ಸಂಭ್ರಮಕ್ಕೆ ಮನರಂಜನೆಯ ಭರ್ಜರಿ ಕೊಡುಗೆಯಾಗಲು ಸಜ್ಜಾಗಿದೆ.
