Cinema News
ಚಿಕ್ಕಣ್ಣ ನಾಯಕನಾಗಿ ಮಿಂಚಲು ಸಜ್ಜು; ‘ಲಕ್ಷ್ಮೀಪುತ್ರ’ ಮೆಲೋಡಿ ಸಾಂಗ್ ಅನಾವರಣ

ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಲಕ್ಷ್ಮೀಪುತ್ರ’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಬೆಂಗಳೂರಿನ AMB ಕಪಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಇನ್ಮೇಲೆ’ ಎಂಬ ಮೆಲೋಡಿ ಗೀತೆಯನ್ನು ಚಿತ್ರರಂಗದ ಎಂಟು ನಟಿಯರ ಸಮ್ಮುಖದಲ್ಲಿ ಅನಾವರಣ ಮಾಡಲಾಯಿತು.
ನಿರ್ದೇಶಕ ಹಾಗೂ ನಿರ್ಮಾಪಕ ಎಪಿ ಅರ್ಜುನ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಸಾಮಾನ್ಯವಾಗಿ ಜನರ ಮಾತಿನಲ್ಲೇ ಬಳಕೆಯಾಗುವ ಪದವನ್ನು ಹಾಡಿನ ಸಾಲಾಗಿ ಬಳಸಿಕೊಂಡಿದ್ದಾರೆ. ಪ್ರೇಮಿಗಳ ನಡುವಿನ ಸಂಭಾಷಣೆಯ ಭಾವನೆಗಳನ್ನು ಒಳಗೊಂಡಿರುವ ಈ ಹಾಡು ಅಪ್ಪಟ ಕನ್ನಡ ಸೊಗಡಿನೊಂದಿಗೆ ಮೂಡಿಬಂದಿದೆ ಎಂದು ಚಿತ್ರತಂಡ ತಿಳಿಸಿದೆ.

ನಟ ಚಿಕ್ಕಣ್ಣ ಮಾತನಾಡಿ, ಎಪಿ ಅರ್ಜುನ್ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಸಂಗೀತ ಎಂದಾಗ ಸಾಕಷ್ಟು ನಿರೀಕ್ಷೆ ಮೂಡಿತ್ತು. ತಮ್ಮ ಮೊದಲ ಸಿನಿಮಾದ ಯಶಸ್ವಿ ಹಾಡಿನ ಜೋಡಿ ಮತ್ತೆ ಒಂದಾಗಿರುವುದರಿಂದ ಈ ಹಾಡಿನ ಮೇಲೂ ದೊಡ್ಡ ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನು ತಲುಪಿದ್ದೇವೆ ಎಂಬ ವಿಶ್ವಾಸವಿದೆ ಎಂದರು.

‘ಇನ್ಮೇಲೆ’ ಹಾಡಿಗೆ ದರ್ಶನ್ ಮೇಳವಂಕಿ ಹಾಗೂ ಪೃಥ್ವಿ ಭಟ್ ಧ್ವನಿ ನೀಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಅರ್ಜುನ್ ನಿರ್ಮಿಸಿರುವ ಈ ಚಿತ್ರಕ್ಕೆ ವಿಜಯ್ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ವಂದಿತಾ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ತಾರಾ, ಕುರಿ ಪ್ರತಾಪ್, ಧರ್ಮಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ. ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿರುವ ಸಿನಿಮಾ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ತೆರೆಗೆ ಬರಲು ಸಜ್ಜಾಗಿದೆ
