Cinema News
‘ಬಲರಾಮನ ದಿನಗಳು’ ದೊಡ್ಡ ಇತಿಹಾಸ ಸೃಷ್ಟಿಸಲಿದೆ ಎಂದ ತಾರಾ ಅನುರಾಧಾ

ಕೆ.ಎಂ. ಚೈತನ್ಯ ನಿರ್ದೇಶನದ ಬಹುನಿರೀಕ್ಷಿತ ‘ಬಲರಾಮನ ದಿನಗಳು’ ಚಿತ್ರದ ರೆಟ್ರೋ ಶೈಲಿಯ ‘ಕ್ವಾಟರ್ರು’ ಹಾಡು ಇತ್ತೀಚೆಗೆ ಬಿಡುಗಡೆಗೊಂಡಿತು. ಹಿರಿಯ ನಟಿ ತಾರಾ ಅನುರಾಧಾ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿರುವ ಈ ಹಾಡಿನಲ್ಲಿ ನಟಿ ವಂದಿತಾ ಗೌಡ ವಿಶೇಷವಾಗಿ ಹೆಜ್ಜೆ ಹಾಕಿದ್ದು, ಈಗಾಗಲೇ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ವಿನೋದ್ ಪ್ರಭಾಕರ್ ಹಾಗೂ ಪ್ರಿಯಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ನಿರ್ಮಿಸಿದ್ದಾರೆ.
ಹಾಡು ಬಿಡುಗಡೆ ಬಳಿಕ ಮಾತನಾಡಿದ ತಾರಾ ಅನುರಾಧಾ, ‘ಕ್ವಾಟರ್ರು’ ಹಾಡು ಅತ್ಯಂತ ಆಕರ್ಷಕವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ಮಾಪಕ ಶ್ರೇಯಸ್ ಅವರ ಚಿತ್ರಪ್ರೇಮ ಮತ್ತು ವಿನೋದ್ ಪ್ರಭಾಕರ್ ಮೇಲಿನ ಅಭಿಮಾನವನ್ನು ಶ್ಲಾಘಿಸಿದ ಅವರು, ಪದ್ಮಾವತಿ ಜಯರಾಮ್ ಇಡೀ ತಂಡಕ್ಕೆ ತಾಯಿಯಂತಿದ್ದಾರೆ ಎಂದರು. ಛಾಯಾಗ್ರಾಹಕ ವೇಣು ಅವರ ಕೆಲಸ, ಚಿತ್ರದ ಕ್ಲಾಸಿಕ್ ಟ್ರೀಟ್ಮೆಂಟ್ ಹಾಗೂ ಸಂತೋಷ್ ನಾರಾಯಣನ್ ಅವರ ಸಂಗೀತ ಚಿತ್ರದ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು. ಟಿ-ಸೀರೀಸ್ ಆಡಿಯೋ ಹಕ್ಕುಗಳನ್ನು ಪಡೆದಿರುವುದೇ ಚಿತ್ರದ ಗುಣಮಟ್ಟಕ್ಕೆ ಸಾಕ್ಷಿ ಎಂದು ಅವರು ಹೇಳಿದರು.

ನಿರ್ಮಾಪಕ ಶ್ರೇಯಸ್ ಮಾತನಾಡಿ, ಇದು ಚಿತ್ರದ ಮೂರನೇ ಹಾಡಾಗಿದ್ದು, ಶೀಘ್ರದಲ್ಲೇ ಮತ್ತೊಂದು ಹಾಡು ಹಾಗೂ ಟ್ರೈಲರ್ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು. ನಿರ್ಮಾಪಕಿ ಪದ್ಮಾವತಿ ಜಯರಾಮ್ ಮಾತನಾಡಿ, ನಿರ್ದೇಶಕರ ಮೇಲೆ ಸಂಪೂರ್ಣ ವಿಶ್ವಾಸವಿರುವ ಕಾರಣ ಚಿತ್ರದ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಹೇಳಿದರು. ಹಿರಿಯ ಕಲಾವಿದರು ಹಾಗೂ ತಂತ್ರಜ್ಞರನ್ನು ಒಂದೇ ವೇದಿಕೆಗೆ ಕರೆತಂದಿರುವುದು ಸಂತಸದ ವಿಚಾರ ಎಂದು ಅವರು ಅಭಿಪ್ರಾಯಪಟ್ಟರು.

ನಿರ್ದೇಶಕ ಕೆ.ಎಂ. ಚೈತನ್ಯ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ‘ಕ್ವಾಟರ್ರು’ ಮೂರನೇ ಹಾಡಾಗಿದೆ ಎಂದು ತಿಳಿಸಿದರು. ‘ಆ ದಿನಗಳು’ ಬಿಡುಗಡೆಯಾದ 19 ವರ್ಷಗಳ ಬಳಿಕ ಅಂಡರ್ವರ್ಡ್ ಕುರಿತ ಸಾಕಷ್ಟು ಅಧ್ಯಯನ ನಡೆಸಿ ಈ ಕಥೆಯನ್ನು ರೂಪಿಸಿರುವುದಾಗಿ ಹೇಳಿದರು. ನಾಯಕ ವಿನೋದ್ ಪ್ರಭಾಕರ್ ಮಾತನಾಡಿ, ‘ಮಾದೇವ’ ಚಿತ್ರದ ನಂತರ ಒಪ್ಪಿಕೊಂಡ ಮಹತ್ವದ ಚಿತ್ರ ಇದಾಗಿದ್ದು, ತಮ್ಮ ವೃತ್ತಿಜೀವನದ ಅತಿದೊಡ್ಡ ಸಿನಿಮಾ ಎಂದು ಹೇಳಿದರು. ಕೆವಿಎನ್ ಮೂಲಕ ಬಿಡುಗಡೆಯಾಗುತ್ತಿರುವುದು ಚಿತ್ರಕ್ಕೆ ಇನ್ನಷ್ಟು ಬಲ ನೀಡಿದ್ದು, ಪ್ರೇಕ್ಷಕರು ಈ ಚಿತ್ರವನ್ನು ಥಿಯೇಟರ್ನಲ್ಲೇ ಅನುಭವಿಸಬೇಕು ಎಂದು ಮನವಿ ಮಾಡಿದರು.
