Cinema News
ಅಪ್ಪು-ಅಪ್ಪು ಎಂದು ಕೂಗುತ್ತಿದ್ದ ಯುವಕನಿಗೆ ಬೈದು ಬುದ್ದಿ ಹೇಳಿದ ಶಿವರಾಜ್ ಕುಮಾರ್
ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಿನ್ನೆ(ಜೂ25) ರಂದು ಅದ್ದೂರಿಯಾಗಿ ಬೈರಾಗಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್ಗೆ ಸೇರಿದಂತೆ ಸಾಕಷ್ಟು ಮಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆದರೆ ಕಾರ್ಯಕ್ರಮ ಆರಂಭದಿಂದಲೂ ಯುವಕನೊಬ್ಬ ಪದೇ ಪದೇ ಅಪ್ಪು-ಅಪ್ಪು ಎಂದು ಕೂಗುತ್ತಿದ್ದು, ಇದರಿಂದ ಗರಂ ಆದ ಶಿವಣ್ಣ ಅಭಿಮಾನ ಮನಸ್ಸಿನಲ್ಲಿರಲಿ, ಬರಿ ಬಾಯಲ್ಲಲ್ಲ ಎಂದು ಬುದ್ದಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡುವ ವೇಳೆ ಅಭಿಮಾನಿಯೋರ್ವ ಒಂದೇ ಸಮನೇ ಅಪ್ಪು-ಅಪ್ಪು ಎಂದು ಘೋಷಣೆ ಕೂಗುತ್ತಿದ್ದ. ಇದರಿಂದ ತಾಳ್ಮೆ ಕಳೆದುಕೊಂಡು ಶಿವಣ್ಣ ‘ಏಯ್ ಸುಮ್ಮನೆ ಕೂತ್ಕೊಳಪ್ಪ, ಅವನದ್ದು, ನನ್ನದು ಒಂದೇ ರಕ್ತ, ನೀನು ಈಗ ನೋಡಿದಿಯಾ, ನಾನು ಅವನನ್ನು ಕೂಸಿನಿಂದಲೂ ನೋಡಿದ್ದೀನಿ. ಪ್ರೀತಿ ಹೃದಯದಲ್ಲಿ ಇರಲಿ, ಕೇವಲ ಗಂಟಲಿನ ಹೊರಗೆ ಮಾತ್ರವಲ್ಲ’ ಎಂದು ಬುದ್ಧಿವಾದ ಹೇಳಿದರು.
ನಗರದ ಸಂತೇಮರಹಳ್ಳಿ ವೃತ್ತಕ್ಕೆ ಶಿವಣ್ಣ ಬರುತ್ತಿದ್ದಂತೆ ಕ್ರೇನ್ ಸಹಾಯದಿಂದ ಬೃಹತ್ ಸೇಬಿನ ಹಾರ ಹಾಕಿ ಪುಷ್ಪವೃಷ್ಟಿ ಮೂಲಕ ಬರಮಾಡಿಕೊಳ್ಳಲಾಯಿತು. ‘ಚಾಮರಾಜನಗರ ನಂದು, ಬರ್ಕಳಯ್ಯ’ ಎಂದು ಜೋಗಯ್ಯ ಚಿತ್ರದ ಡೈಲಾಗ್ ಹೇಳಿ ಶಿವಣ್ಣ ಎರಡು ನಿಮಿಷ ಡ್ಯಾನ್ಸ್ ಮಾಡಿದರು. ಈ ವೇಳೆ ಶಿವಣ್ಣನಿಗೆ ಡಾಲಿ ಧನಂಜಯ್ ಸಾಥ್ ನೀಡಿದರು.
ಇದೇ ವೇಳೆ ಮಾತನಾಡಿದ ಶಿವಣ್ಣ, ” ಚಾಮರಾಜನಗರ ನನ್ನ ತವರುಮನೆ ಇದ್ದಂತೆ, ನಮ್ಮ ಊರು, ಇಲ್ಲಿ ಯಾವಾಗಲೂ ಹೆಚ್ಚು ಪ್ರೀತಿ ಸಿಗಲಿದೆ, ಒಂದು ವಿಭಿನ್ಮ ಕತೆಯ ಸಿನಿಮಾ ಬರುತ್ತಿದ್ದು, ಎಲ್ಲರೂ ನೋಡಬೇಕು, ನಮ್ಮ ತಂಡವನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.