Cinema News
ಸೂರ್ಯ ಅಭಿನಯದ “ಕರುಪ್ಪು” ಕರ್ನಾಟಕದಲ್ಲಿ ಕೆವಿಎನ್ ಮೂಲಕ ಬಿಡುಗಡೆ
ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಅಭಿನಯದ ಬಹು ನಿರೀಕ್ಷಿತ “ಕರುಪ್ಪು” ಸಿನಿಮಾ ಇದೇ ತಿಂಗಳ 14ರಂದು ಭರ್ಜರಿಯಾಗಿ ತೆರೆಗೆ ಬರುತ್ತಿದೆ. ಸೂರ್ಯ ಹಾಗೂ ತ್ರಿಷಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಈಗ ಕರ್ನಾಟಕದಲ್ಲಿ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ. ವಿಶೇಷವೆಂದರೆ, ಚಿತ್ರದ ಕರ್ನಾಟಕ ವಿತರಣೆ ಹಕ್ಕು ಇದೀಗ ಪ್ರತಿಷ್ಠಿತ ಕೆವಿಎನ್ ಸಂಸ್ಥೆ ಪಡೆದುಕೊಂಡಿದ್ದು, ರಾಜ್ಯಾದ್ಯಂತ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
“ಕರುಪ್ಪು” ಚಿತ್ರವನ್ನು ಖ್ಯಾತ ನಿರ್ದೇಶಕ ಆರ್ಜೆ ಬಾಲಾಜಿ ನಿರ್ದೇಶಿಸಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಬಾಬು ಹಾಗೂ ಎಸ್.ಆರ್. ಪ್ರಭು ನಿರ್ಮಾಣ ಮಾಡಿರುವ ಈ ಸಿನಿಮಾಗೆ ಅಶ್ವಿನ್ ರವಿಚಂದ್ರನ್, ರಾಹುಲ್ ರಾಜ್ ಮತ್ತು ಗೋಪಿ ಕೃಷ್ಣನ್ ಚಿತ್ರಕಥೆ ರಚಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಪ್ರಚಾರ ವಿಷಯಗಳು ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ರಿಲೀಸ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸೂರ್ಯ ಮತ್ತು ತ್ರಿಷಾ ಜೊತೆಗೆ ಇಂದ್ರನ್ಸ್, ನಟ್ಟಿ, ಸ್ವಾಸಿಕಾ, ಶಿವದಾ, ಅನಘ ಮಾಯಾ ರವಿ, ಸುಪ್ರೀತ್ ರೆಡ್ಡಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಾಯಿ ಅಭಯಂಕರ್ ಸಂಗೀತ ನೀಡಿದ್ದು, ಹಾಡುಗಳು ಮತ್ತು ಬ್ಯಾಕ್ಗ್ರೌಂಡ್ ಸ್ಕೋರ್ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ರಾಜ್ಯಾದ್ಯಂತ ಕೆವಿಎನ್ ವಿತರಣೆ ಮಾಡುತ್ತಿರುವುದರಿಂದ “ಕರುಪ್ಪು” ಕರ್ನಾಟಕದಲ್ಲೂ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆ ಹೆಚ್ಚಾಗಿದೆ.