Cinema News
ನಿರೂಪ್ ಭಂಡಾರಿ ‘ಅತಿಕಾಯ’ನಿಗೆ ರಾಕ್ಲೈನ್ ಸಾಥ್; ಖಡಕ್ ಲುಕ್ನಲ್ಲಿ ಕಮಿಷನರ್ ಪಾತ್ರ
‘ರಂಗಿ ತರಂಗ’ ಖ್ಯಾತಿಯ ನಿರೂಪ್ ಭಂಡಾರಿ ಹಾಗೂ ಸ್ವಾತಿಷ್ಟ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ಅತಿಕಾಯ’ ಸಿನಿಮಾಗೆ ಇದೀಗ ಖ್ಯಾತ ನಿರ್ಮಾಪಕ ಹಾಗೂ ನಟ ರಾಕ್ಲೈನ್ ವೆಂಕಟೇಶ್ ಸೇರ್ಪಡೆಯಾಗಿದ್ದಾರೆ. ಚಿತ್ರದಲ್ಲಿ ಅವರು ಪೊಲೀಸ್ ಕಮಿಷನರ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಖಾಕಿ ಧರಿಸಿ ಖಡಕ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರ ಪಾತ್ರ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗುವ ನಿರೀಕ್ಷೆ ಮೂಡಿದೆ.
ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಈ ಹಿಂದೆಯೂ ಹಲವು ಬಾರಿ ಕಾಣಿಸಿಕೊಂಡಿರುವ ರಾಕ್ಲೈನ್ ವೆಂಕಟೇಶ್, ‘ಅತಿಕಾಯ’ನಲ್ಲಿ ಇನ್ನಷ್ಟು ಗಂಭೀರ ಹಾಗೂ ಪವರ್ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನೈಜ ಘಟನೆಗಳು ಮತ್ತು ನೈಜ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದಿರುವ ಕಥೆಯಾಗಿರುವುದರಿಂದ, ಪೊಲೀಸ್ ಕಮಿಷನರ್ ಪಾತ್ರವನ್ನೂ ವಾಸ್ತವಕ್ಕೆ ಹತ್ತಿರವಾಗುವಂತೆ ಕಟ್ಟಿಕೊಡಲಾಗಿದೆ ಎಂದು ನಿರ್ದೇಶಕ ನಾಗರಾಜ್ ಪೀಣ್ಯ ತಿಳಿಸಿದ್ದಾರೆ. ಸಿನಿಮಾದಲ್ಲಿನ ಪಾತ್ರ ನಿಜ ಜೀವನದಲ್ಲೂ ಇಂಥ ಅಧಿಕಾರಿಯೊಬ್ಬರು ಇದ್ದರೆ ಚೆನ್ನಾಗಿರುತ್ತದೆ ಎನ್ನಿಸುವಷ್ಟು ಸಹಜವಾಗಿ ಮೂಡಿಬಂದಿದೆ ಎಂಬುದು ನಿರ್ದೇಶಕರ ಮಾತು.
‘ಪದೇ ಪದೇ’, ‘ನಮಕ್ಹರಾಮ್’ ಸೇರಿದಂತೆ ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ನಿರ್ದೇಶಿಸಿರುವ ನಾಗರಾಜ್ ಪೀಣ್ಯ, ಇದೀಗ ‘ಅತಿಕಾಯ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಭಿನ್ನ ನಿರೂಪಣೆಯ ಕಥೆಯೊಂದಿಗೆ ಸಿದ್ಧವಾಗಿರುವ ಈ ಚಿತ್ರ ಸದ್ಯ ಅಂತಿಮ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲೇ ಹೆಚ್ಚಿನ ಭಾಗದ ಶೂಟಿಂಗ್ ನಡೆಸಲಾಗಿದ್ದು, ಕಥೆಯ ನೈಜತೆಗೆ ಧಕ್ಕೆಯಾಗದಂತೆ ರಿಯಲಿಸ್ಟಿಕ್ ಆಗಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಎ.ಎನ್ ಮೂವಿ ಮೇಕರ್ಸ್ ಹಾಗೂ ನಿಹಾಲ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಅತಿಕಾಯ’ ಚಿತ್ರವನ್ನು ಜೆ. ಮಹೇಶ್ ಕುಮಾರ್ ಅರ್ಪಿಸುತ್ತಿದ್ದಾರೆ. ಹರೀಶ್ ರಾಯ್, ದಿನೇಶ್ ಮಂಗಳೂರು, ಬಿ. ಸುರೇಶ್, ಪುಂಗ ಉಮೇಶ್, ಕಾಕ್ರೋಚ್ ಸುಧೀ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ, ‘ಕಾಂತಾರ’ ಖ್ಯಾತಿಯ ರಕ್ಷಿತ್ ರಾಮಚಂದ್ರ ಶೆಟ್ಟಿ, ಮಹಾಂತೇಶ್ ಹಿರೇಮಠ್ ಹಾಗೂ ಜಾಕ್ ಜಾಲಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಉದಯಲೀಲ ಛಾಯಾಗ್ರಹಣ, ಶ್ರೀನಿವಾಸ್ ಪಿ. ಬಾಬು ಸಂಕಲನ ಹಾಗೂ ಸಚಿನ್ ಬಸ್ರೂರು ಅವರ ಸಂಗೀತ ಚಿತ್ರಕ್ಕಿದೆ.