Cinema News
‘ಕರ್ಣಾಟಬಲಂ ಅಜೇಯಂ’ ಚಿತ್ರಕ್ಕೆ ನವಲಗುಂದ ರೈತ ಹುತಾತ್ಮರ ದಿನದ ನೈಜ ಚಿತ್ರಣ
ಎಂ.ಪಿ.ಎಂ.ಜಿ. ಫಿಲಂ ಫ್ಯಾಕ್ಟರಿ ನಿರ್ಮಿಸುತ್ತಿರುವ ‘ಕರ್ಣಾಟಬಲಂ ಅಜೇಯಂ’ ಚಿತ್ರದ ಮೂಲಕ ಶಾಸಕ ಸಿ.ಪಿ. ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಿರ್ದೇಶಕ ನಾಗಣ್ಣ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಚಿತ್ರೀಕರಣ ಉತ್ತರ ಕರ್ನಾಟಕದ ಬಾದಾಮಿ, ಪಟ್ಟದಕಲ್ಲು, ಐಹೊಳೆ, ನರಗುಂದ ಹಾಗೂ ನವಲಗುಂದ ಸುತ್ತಮುತ್ತ ನಡೆಯುತ್ತಿದೆ. ಜುಲೈ 21ರಂದು ನವಲಗುಂದದಲ್ಲಿ ನಡೆದ ರೈತ ಹುತಾತ್ಮರ ದಿನಾಚರಣೆಯ ಸಂದರ್ಭದಲ್ಲಿ ನಡೆದ ನೈಜ ಹೋರಾಟದ ವಾತಾವರಣವನ್ನೇ ಚಿತ್ರತಂಡ ಕ್ಯಾಮೆರಾದಲ್ಲಿ ಸೆರೆಹಿಡಿದಿದೆ.
ಚಿತ್ರದಲ್ಲಿ ರೈತನ ಪಾತ್ರದಲ್ಲಿ ನಟಿಸುತ್ತಿರುವ ಸಿ.ಪಿ. ಯೋಗೀಶ್ವರ್, ಶಾಸಕ ಎನ್.ಕೆ. ಕೋನರೆಡ್ಡಿ ಸೇರಿದಂತೆ ಹಲವರು ರೈತ ಹೋರಾಟಗಾರರೊಂದಿಗೆ ಘೋಷಣೆ ಕೂಗುವ ದೃಶ್ಯಗಳಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಗೀಶ್ವರ್, ಉತ್ತರ ಕರ್ನಾಟಕದ ರೈತರ ಬದುಕು, ಅವರ ಹೋರಾಟ ಮತ್ತು ಸಂಕಷ್ಟಗಳೇ ಚಿತ್ರದ ಪ್ರಮುಖ ಕಥಾವಸ್ತು ಎಂದು ತಿಳಿಸಿದರು. ಚಾಲುಕ್ಯರ ವೈಭವದ ನೆಲೆಯಾದ ಈ ಭಾಗದಲ್ಲಿ ಇಂದಿನ ರೈತರ ಪರಿಸ್ಥಿತಿಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ಸಾಗುವ ಈ ಕಥೆಯಲ್ಲಿ ಮಹದಾಯಿ ಯೋಜನೆ ಹಾಗೂ ರೈತರ ಹೋರಾಟಕ್ಕೂ ಮಹತ್ವದ ಸ್ಥಾನವಿದೆ ಎಂದು ಯೋಗೀಶ್ವರ್ ಹೇಳಿದರು. ಈಗಾಗಲೇ ಸುಮಾರು 30 ಶೇಕಡಾ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನೂ ಕೆಲವು ದಿನಗಳು ನವಲಗುಂದದಲ್ಲೇ ಶೂಟಿಂಗ್ ಮುಂದುವರಿಯಲಿದೆ. ಚಿತ್ರವನ್ನು ಸಂಕ್ರಾಂತಿ ಹಬ್ಬದ ವೇಳೆಗೆ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ಚಿತ್ರಕ್ಕೆ ಎಂ.ಎಸ್. ರಮೇಶ್, ವಿಶ್ವ ಮತ್ತು ಗುರುರಾಜ್ ದೇಸಾಯಿ ಕಥೆ-ಚಿತ್ರಕಥೆ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಹಾಗೂ ಶೇಖರ್ ಚಂದ್ರ ಛಾಯಾಗ್ರಹಣವಿದೆ. ಮಣಿಕಾ ವಿಶ್ವಕರ್ಮ ಮತ್ತು ರೇಖಾ ಪಾಂಡೆ ನಾಯಕಿಯರಾಗಿ ನಟಿಸುತ್ತಿದ್ದು, ತೆಲುಗಿನ ಹಿರಿಯ ನಟ ಜಗಪತಿ ಬಾಬು ಹಾಗೂ ನಟಿ ಲಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ನಾಗಣ್ಣ, ಶಾಸಕ ಎನ್.ಕೆ. ಕೋನರೆಡ್ಡಿ ಮತ್ತು ಹೋರಾಟಗಾರ ಮುತ್ತಣ್ಣ ಚಿತ್ರೀಕರಣದ ವೇಳೆ ಉಪಸ್ಥಿತರಿದ್ದರು.