Cinema News

‘ ರಾಮರಸ’ದಲ್ಲಿ “ಗುರು ಸಿದ್ದ” ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್ .

Published

on

ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ‘ರಾಮರಸ’ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಗುರು ದೇಶಪಾಂಡೆ ನಿರ್ಮಾಣದ ಹಾಗೂ ಬಿ.ಎಂ.ಗಿರಿರಾಜ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಗುರು ಸಿದ್ಧ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಅಲೆಮಾರಿ ಪರಂಪರೆಯಾದ ‘ಸುಡುಗಾಡು ಸಿದ್ಧ’ ಸಮುದಾಯದ ಹಿನ್ನೆಲೆಯನ್ನು ಈ ಪಾತ್ರ ಹೊಂದಿದೆ. ಇತ್ತೀಚೆಗೆ ರಾಮನವಮಿ ಸಂದರ್ಭದಲ್ಲಿ ಅವದೂತ ಶ್ರೀ ವಿನಯ್ ಗುರೂಜಿ ಅವರು “ಗುರು ಸಿದ್ದ” ಪಾತ್ರದ ಕ್ಯಾರೆಕ್ಟರ್ ಟೀಸರ್ ಅನಾವರಣ ಮಾಡಿ “ರಾಮರಸ” ಚಿತ್ರತಂಡಕ್ಕೆ ಶುಭ ಕೋರಿದರು. ಸಾಕಷ್ಟು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

 

“ರಾಮರಸ” ಆರಂಭವಾದ್ದುದ್ದರ ಬಗ್ಗೆ ತಿಳಿಸಿ ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ, ನಮ್ಮ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಅಭಿನಯಿಸಿರುವುದು ಬಹಳ ಖುಷಿಯಾಗಿದೆ. “ಜಂಟಲ್ ಮ್ಯಾನ್” ಚಿತ್ರದ ನಂತರ ಅವರ ನಮ್ಮ ಸಂಸ್ಥೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗುರು ಸಿದ್ದ‌ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರ ಪವಾಡ ಪುರುಷರು ಎಂದೇ ಕರೆಯಲ್ಪಡುವ ಸುಡುಗಾಡು ಸಿದ್ದರ ಪಾತ್ರವಾಗಿರುತ್ತದೆ. ಅವರು ಪರಮಶಿವನ ಪರಮ ಭಕ್ತರು. ಒಂದೇ ಕಡೆ ಇರದ ಸಿದ್ದರು ಹಳ್ಳಿಹಳ್ಳಿಗೆ ಸಂಚಾರ ಮಾಡುವುದರ ಜೊತೆಗೆ, ಭವಿಷ್ಯ ನುಡಿಯುವುದು ಮತ್ತು ಅಪರೂಪದ ಗಿಡಮೂಲಿಕೆಗಳ ಮೂಲಕ ಚಿಕಿತ್ಸೆ ನೀಡುವುದು ಮುಂತಾದ ಜನಾನುರಾಗಿ ಕೆಲಸಗಳನ್ನು ಮಾಡುತ್ತಾರೆ. ಈ ಪಾತ್ರದ ಟೀಸರ್ ಅನಾವರಣ ಮಾಡಿಕೊಟ್ಟ ವಿನಯ್ ಗುರೂಜಿ ಅವರಿಗೆ ಅನಂತ ಧನ್ಯವಾದ. ಇನ್ನೂ , ಈ ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳ ಕ್ಲೈಮ್ಯಾಕ್ಸ್ ಅನ್ನು ಜನರು ಚಪ್ಪಲಿ ಬಿಟ್ಟು ನೋಡುವುದಂತು ಖಂಡಿತ. ಅಷ್ಟು ಅದ್ಭುತವಾಗಿ ಮೂಡಿಬಂದಿದೆ. ಹಾಡುಗಳು ಸಹ ಒಂದಕ್ಕಿಂತ ಒಂದು ಚೆನ್ನಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು.

 

 

 

 

 

 

ಈ ಚಿತ್ರವನ್ನು ಗುರು ದೇಶಪಾಂಡೆ ಅವರು ಅದು ಹೇಗೆ ಕಡಿಮೆ ಬಜೆಟ್ ನಲ್ಲಿ ಮಾಡೋಣ ಅಂದುಕೊಂಡರೊ ಗೊತ್ತಿಲ್ಲ. ಇದೊಂದು ಬಿಗ್ ಬಿಗ್ ಬಜೆಟ್ ಸಿನಿಮಾ. ನನ್ನ ಪಾತ್ರ ಕೂಡ ಚೆನ್ನಾಗಿದೆ. ವಿ.ಎಫ್.ಎಕ್ಸ್ ವರ್ಕ್ ಅಂತೂ ಅದ್ಬುತವಾಗಿದೆ. ಇದು ಈ ವರ್ಷದ ದೊಡ್ಡ ಚಿತ್ರವಾಗಲಿದೆ ಎಂದು ಪ್ರಜ್ವಲ್ ದೇವರಾಜ್ ಹೇಳಿದರು. ‌ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡದವರಿಗೆ ಸಹ ನಿರ್ಮಾಪಕ ವಿಕ್ರಮ್ ಆರ್ಯ ಧನ್ಯವಾದ ಹೇಳಿದರು.

 

 

 

 

 

 

ಚಿತ್ರತಂಡದಿಂದ ನೀಡಲಾದ ರೈಸಿಂಗ್ ಸ್ಟಾರ್ ಎಂಬ ಬಿರುದು ಸ್ವೀಕರಿಸಿ ಮಾತನಾಡಿದ ನಾಯಕ ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್ ಅವರಿಂದ ನಾನು ಈ ಬಿರುದು ಸ್ವೀಕರಿಸಿದ್ದು ಖುಷಿಯಾಗಿದೆ. ಒಂದೊಳ್ಳೆ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು. ಛಾಯಾಗ್ರಾಹಕ ಕೆ.ಕೃಷ್ಣಕುಮಾರ್, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಗೀತರಚನೆಕಾರರಾದ ಡಾ||ವಿ.ನಾಗೇಂದ್ರ ಪ್ರಸಾದ್, ಪುನೀತ್ ರಂಗಸ್ವಾಮಿ, ಸಾಹಸ ನಿರ್ದೇಶಕ ಅರ್ಜುನ್ ಮಾಸ್ಟರ್, ನಟಿ ಯಮುನಾ ಶ್ರೀನಿಧಿ ಮುಂತಾದವರು “ರಾಮರಸ” ಚಿತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ “ಜಂಟಲ್ ಮ್ಯಾನ್” ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ಪ್ರಜ್ವಲ್ ದೇವರಾಜ್ ಅವರನ್ನು ಸನ್ಮಾನಿಸಲಾಯಿತು. ಆ ಚಿತ್ರದ ನಿರ್ದೇಶಕ ಜಡೇಶ್ ಹಂಪಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

Spread the love
Click to comment

Copyright © 2019 PopcornKannada.com