Cinema News

ಮರ್ಡರ್ ಮಿಸ್ಟರಿ, ಕ್ರೈಂ ಥ್ರಿಲ್ಲರ್; ‘ಕೌಂತೇಯ’ ಟೀಸರ್ ಕುತೂಹಲ!

Published

on

‘ಕುಂಭರಾಶಿ’ ಖ್ಯಾತಿಯ ಬಿ.ಕೆ. ಚಂದ್ರಹಾಸ್ ನಿರ್ದೇಶನದ ‘ಕೌಂತೇಯ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಶ್ರೀ ಮಹಾಂಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುರೇಶ್ ಕುಮಾರ್ ನಿರ್ಮಿಸಿರುವ ಈ ಸಿನಿಮಾದಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್ ನಿವೃತ್ತಿಯ ಅಂಚಿನಲ್ಲಿರುವ ಸಬ್‌ಇನ್ಸ್‌ಪೆಕ್ಟರ್ ರಂಗನಾಥ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ನಟ ಮನೋರಂಜನ್ ರವಿಚಂದ್ರನ್ ವಿಭಿನ್ನ ನೆಗೆಟಿವ್ ಶೇಡ್ ಹೊಂದಿರುವ ಪಾತ್ರವನ್ನು ನಿರ್ವಹಿಸಿದ್ದಾರೆ. ‘ಕೌಂತೇಯ’ ಎಂಬುದು ಕುಂತೀಪುತ್ರ ಕರ್ಣನ ಮತ್ತೊಂದು ಹೆಸರು. ಆದರೆ ಚಿತ್ರಕ್ಕೂ ಪೌರಾಣಿಕ ಕಥೆಗೂ ಯಾವುದೇ ಸಂಬಂಧವಿಲ್ಲ. ಇದು ಕೊಲೆ ರಹಸ್ಯದ ಸುತ್ತ ಸಾಗುವ ಭಾವನಾತ್ಮಕ ಕ್ರೈಂ ಥ್ರಿಲ್ಲರ್ ಆಗಿದೆ.

 

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಬಿ.ಕೆ. ಚಂದ್ರಹಾಸ್, ಮನೋರಂಜನ್ ಚಿತ್ರದಲ್ಲಿ ವಿಲನ್ ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದು, ರಕ್ತಪಾತದಿಂದ ಯಾವುದೇ ಒಳಿತಿಲ್ಲ ಎಂಬ ಸಂದೇಶವನ್ನು ಸಿನಿಮಾದ ಮೂಲಕ ನೀಡುವ ಪ್ರಯತ್ನ ಮಾಡಲಾಗಿದೆ ಎಂದರು. ಬೆಂಗಳೂರು ಹಾಗೂ ಮೈಸೂರು ಸುತ್ತಮುತ್ತ ಮೂರು ಹಂತಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಸದ್ಯ ಚಿತ್ರದ ರೀರೆಕಾರ್ಡಿಂಗ್ ಕೆಲಸ ನಡೆಯುತ್ತಿದ್ದು, ನವೆಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಇದೆ ಎಂದು ತಿಳಿಸಿದರು. ನಟಿ ಪ್ರಿಯಾಂಕ ತಿಮ್ಮೇಶ್, ತಾವು ಚಿತ್ರದಲ್ಲಿ ಎಸಿಪಿ ಪಾತ್ರ ನಿರ್ವಹಿಸಿದ್ದು, ಡಬ್ಬಿಂಗ್ ವೇಳೆ ಸಿನಿಮಾ ವೀಕ್ಷಿಸಿದ್ದಾಗಿ ಹೇಳಿದರು. ಸಿನಿಮಾ ಕುತೂಹಲ ಮೂಡಿಸುವ ರೀತಿಯಲ್ಲಿ ಸಾಗುತ್ತದೆ ಹಾಗೂ ಮುಂದೇನು ಎಂಬ ಆಸಕ್ತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

 

 

 

 

 

ನಟ ಮನೋರಂಜನ್ ರವಿಚಂದ್ರನ್ ತಮ್ಮ ಪಾತ್ರದ ಬಗ್ಗೆ ಮಾತನಾಡಿ, ಚಿತ್ರದಲ್ಲಿ ನೆಗೆಟಿವ್ ಶೇಡ್ ಹೊಂದಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಸಿನಿಮಾದಲ್ಲಿ ತಮ್ಮ ಪಾತ್ರ ಇರುವುದಿಲ್ಲ ಎಂದರು. ಈ ಪಾತ್ರವನ್ನು ಒಂದು ಪ್ರಯೋಗದಂತೆ ಸ್ವೀಕರಿಸಿದ್ದು, ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿದೆ ಎಂದು ಹೇಳಿದರು. ಪೊಲೀಸ್ ಹಾಗೂ ವಿಲನ್ ನಡುವಿನ ಸಂಘರ್ಷವೇ ಕಥೆಯ ಪ್ರಮುಖ ಭಾಗವಾಗಿದ್ದು, ಅದರ ನಡುವೆ ಅಡಗಿರುವ ಒಂದು ವಿಶೇಷ ವಿಚಾರವನ್ನು ಪ್ರೇಕ್ಷಕರು ಸಿನಿಮಾದಲ್ಲೇ ತಿಳಿದುಕೊಳ್ಳಬೇಕು ಎಂದು ಕುತೂಹಲ ಹೆಚ್ಚಿಸಿದರು. ಅಚ್ಯುತ್ ಕುಮಾರ್, ನಿರ್ದೇಶಕ ಚಂದ್ರಹಾಸ್ ಅವರಿಗೆ ಕಥೆ ಮತ್ತು ಸಿನಿಮಾದ ಬಗ್ಗೆ ಸ್ಪಷ್ಟತೆ ಇದೆ. ಚಿತ್ರೀಕರಣ ಯಾವುದೇ ಅಡೆತಡೆಯಿಲ್ಲದೆ ನಡೆದಿದ್ದು, ನಿರ್ಮಾಪಕರು ಇಡೀ ಶೂಟಿಂಗ್ ಅವಧಿಯಲ್ಲಿ ಚಿತ್ರತಂಡದ ಜೊತೆಗಿದ್ದು ಸಹಕಾರ ನೀಡಿದ್ದಾರೆ ಎಂದರು.

 

 

 

 

 

ಚಿತ್ರದಲ್ಲಿ ಬಿಗ್‌ಬಾಸ್ ಖ್ಯಾತಿಯ ನೀತು ಕೂಡ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ರಾಘವೇಂದ್ರ ಚಿತ್ರದ ಎರಡು ಹಾಡುಗಳಿಗೆ ಸಂಗೀತ ನೀಡಿರುವುದಾಗಿ ತಿಳಿಸಿದರು. ಛಾಯಾಗ್ರಾಹಕ ಪಿ.ಎಲ್. ರವಿ, ಸಂಕಲನಕಾರ ಹಾಗೂ ಸಂಭಾಷಣೆ ರಚಿಸಿರುವ ಅನುರಂಜನ್ ಸೇರಿದಂತೆ ತಂತ್ರಜ್ಞರು ‘ಕೌಂತೇಯ’ ಸಿನಿಮಾದ ಅನುಭವಗಳನ್ನು ಹಂಚಿಕೊಂಡರು. ಪೊಲೀಸ್ ತನಿಖೆ, ಅಪರಾಧ, ಭಾವನೆ ಹಾಗೂ ರಹಸ್ಯದ ಅಂಶಗಳನ್ನು ಒಳಗೊಂಡಿರುವ ಈ ಕ್ರೈಂ ಥ್ರಿಲ್ಲರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

Spread the love

Copyright © 2019 PopcornKannada.com