Cinema News
ಕೆವಿಎನ್ ಪ್ರೊಡಕ್ಷನ್ಸ್ನಿಂದ ‘ಬೀರ್ಬಲ್ ಕೇಸ್ 2’ ಅನೌನ್ಸ್: ಶಿವಣ್ಣ ಗೆಸ್ಟ್ ಅಪಿಯರೆನ್ಸ್, ಖುಷ್ಬೂ-ಡೈಸಿ ಬೋಪಣ್ಣ ರೀ-ಎಂಟ್ರಿ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಗಮನ ಸೆಳೆಯುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್, ಇದೀಗ ಮತ್ತೊಂದು ಬಹುನಿರೀಕ್ಷಿತ ಚಿತ್ರವನ್ನು ಘೋಷಿಸಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಸಾರಥ್ಯದಲ್ಲಿ ‘ಬೀರ್ಬಲ್ ಟ್ರೈಲಜಿ ಕೇಸ್ 2’ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಿದ್ದು, ಮತ್ತೊಮ್ಮೆ ಬುದ್ಧಿವಂತ ತನಿಖೆ, ಕುತೂಹಲಕಾರಿ ತಿರುವುಗಳು ಹಾಗೂ ರೋಚಕ ಕೋರ್ಟ್ರೂಮ್ ಡ್ರಾಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಸಜ್ಜಾಗಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ‘ಬೀರ್ಬಲ್ ಟ್ರೈಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ’ ಸಿನಿಮಾ ತನ್ನ ವಿಭಿನ್ನ ಕಥಾಹಂದರ ಹಾಗೂ ಸಸ್ಪೆನ್ಸ್ನಿಂದ ಪ್ರೇಕ್ಷಕರ ಗಮನ ಸೆಳೆದಿತ್ತು. ಚಿತ್ರದಲ್ಲಿ ವಕೀಲ ಮಹೇಶ್ ದಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಎಂ.ಜಿ. ಶ್ರೀನಿವಾಸ್ (ಶ್ರೀನಿ) ಅವರ ಚಾಣಾಕ್ಷ ತನಿಖಾ ಶೈಲಿ ಮೆಚ್ಚುಗೆ ಪಡೆದಿತ್ತು. ಇದೀಗ ಅದೇ ಯಶಸ್ವಿ ಪಾತ್ರ ಮತ್ತೊಂದು ಸಂಕೀರ್ಣ ಪ್ರಕರಣದ ಬೆನ್ನುಹತ್ತಲಿದ್ದು, ಈ ಬಾರಿ ಪ್ರಕರಣ ಇನ್ನಷ್ಟು ಕಗ್ಗಂಟಾಗಿರಲಿದೆ ಎಂಬ ಕುತೂಹಲ ಮೂಡಿದೆ.
‘ಬೀರ್ಬಲ್ ಟ್ರೈಲಜಿ ಕೇಸ್ 2’ನ ಪ್ರಮುಖ ವಿಶೇಷತೆಯಾಗಿ ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್ (SCU) ವಿಸ್ತರಣೆಯಾಗಲಿದೆ. ಶ್ರೀನಿ ನಿರ್ದೇಶನದ ಯಶಸ್ವಿ ಚಿತ್ರ ‘ಘೋಸ್ಟ್’ನ ಕಥೆಯೊಂದಿಗೆ ‘ಬೀರ್ಬಲ್ ಕೇಸ್ 2’ಗೆ ಕೊಂಡಿ ಬೆಸೆಯಲಾಗಿದ್ದು, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಅವರು ಸಿನಿಮಾದಲ್ಲಿ ಪವರ್ಫುಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕ್ರಾಸ್ಓವರ್ ಚಿತ್ರಕ್ಕೆ ಮತ್ತಷ್ಟು ನಿರೀಕ್ಷೆ ಮೂಡಿಸಿದ್ದು, ಎರಡೂ ಸಿನಿಮಾಗಳ ಪಾತ್ರಗಳು ಹಾಗೂ ಕಥೆಗಳ ನಡುವಿನ ನಂಟು ಕುತೂಹಲ ಕೆರಳಿಸಿದೆ.
ಇನ್ನು ಚಿತ್ರದ ತಾರಾಗಣದಲ್ಲೂ ಹಲವು ವಿಶೇಷತೆಗಳಿವೆ. ಬಹುಭಾಷಾ ನಟಿ ಖುಷ್ಬೂ ಸುಂದರ್ ಪ್ರಮುಖ ಹಾಗೂ ಶಕ್ತಿಶಾಲಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಮತ್ತೊಂದೆಡೆ, ಪ್ರತಿಭಾವಂತ ನಟಿ ಡೈಸಿ ಬೋಪಣ್ಣ ಕೂಡ ಬಹುಕಾಲದ ಬಳಿಕ ಬೆಳ್ಳಿತೆರೆಗೆ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಯುವ ಪ್ರತಿಭೆ ಯೋಗಲಕ್ಷ್ಮಿ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಲಿದ್ದು, ಸಂಪತ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಹಾಗೂ ಮಹೇನ್ ಸಿಂಹ ಛಾಯಾಗ್ರಹಣವಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.