Cinema News
ವಿಭಿನ್ನ ಪಾತ್ರಗಳಲ್ಲಿ ಕಿರಣ್ ರಾಜ್, ಕ್ರಿಶ್ ಮಿಂಚಲಿರುವ “ಶೇರ್”
ಕಿರಣ್ ರಾಜ್ ಮತ್ತು ಕ್ರಿಶ್ ಅಭಿನಯದ “ಶೇರ್” ಸಿನಿಮಾ ಮೇ 15 ರಂದು ತೆರೆಗೆ ಬರಲು ಸಜ್ಜಾಗಿದೆ. ಆರಂಭದಿಂದಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ಪ್ರಸಿದ್ದ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ.
ಗ್ರೇಸ್ ರಾಜ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ಡಾ|| ಸುದರ್ಶನ್ ಸುಂದರರಾಜ್ ನಿರ್ಮಿಸಿರುವ ಈ ಚಿತ್ರಕ್ಕೆ ಹೆಚ್. ಕುಮಾರ್ (ರಾಟೆ) ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಕಿರಣ್ ರಾಜ್, ಸುರೇಖಾ, ಕ್ರಿಶ್, ತನಿಷಾ ಕುಪ್ಪಂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೇಲರ್ ಬಿಡುಗಡೆಯ ನಂತರ ಚಿತ್ರತಂಡ ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಿರ್ದೇಶಕ ಪ್ರಸಿದ್ದ್ ಮಾತನಾಡಿ, ಇದು ತಮ್ಮ ಮೂರನೇ ನಿರ್ದೇಶನದ ಚಿತ್ರ ಎಂದು ಹೇಳಿದರು. ಕಿರಣ್ ರಾಜ್ ಅವರು ಈವರೆಗೆ ಮಾಡದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು. ಅನಾಥ ಮಕ್ಕಳ ಜೀವನದ ಸನ್ನಿವೇಶಗಳನ್ನು ಒಳಗೊಂಡ ಈ ಕಥೆಯಲ್ಲಿ ಸಾಕಷ್ಟು ಥ್ರಿಲ್ಲಿಂಗ್ ಅಂಶಗಳಿವೆ ಎಂದು ವಿವರಿಸಿದರು. ನಿರ್ಮಾಪಕರ ಪುತ್ರ ಕ್ರಿಶ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದಕ್ಕೆ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ. ತನಿಷಾ ಕುಪ್ಪಂಡ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎ ಪ್ರಮಾಣಪತ್ರ ದೊರೆತಿದ್ದು, ಮೇ 15 ರಂದು ಬಿಡುಗಡೆಯಾಗಲಿದೆ ಎಂದರು.
ನಟ ಕ್ರಿಶ್, ತಮ್ಮ ಪಾತ್ರ “ದುನಿಯಾ” ಸಿನಿಮಾದ ಯೋಗಿ ಮಾಡಿದ ಪಾತ್ರದ ನೆನಪನ್ನು ತರಿಸುವಂತಿದೆ ಎಂದು ಹೇಳಿದರು. ಸಾಕಷ್ಟು ತಯಾರಿ ಮಾಡಿಕೊಂಡು ನಟಿಸಿದ್ದಾಗಿ ತಿಳಿಸಿದರು. ಕಿರಣ್ ರಾಜ್, ಈ ಚಿತ್ರದಲ್ಲಿ ಅನಾಥ ಯುವಕನಾಗಿ ಕಾಣಿಸಿಕೊಂಡಿದ್ದು, ಇದು ಕ್ರೈಮ್ ಆಕ್ಷನ್ ಥ್ರಿಲ್ಲರ್ ಎಂದು ಹೇಳಿದರು.
ನಿರ್ಮಾಪಕ ಡಾ|| ಸುದರ್ಶನ್ ಸುಂದರರಾಜ್, ವೃತ್ತಿಯಲ್ಲಿ ವಕೀಲರಾಗಿದ್ದು, ತಮ್ಮ ಮಗನಿಗಾಗಿ ಈ ಚಿತ್ರವನ್ನು ನಿರ್ಮಿಸಿದ್ದಾಗಿ ಹೇಳಿದರು. ಕೆ.ಆರ್.ಜಿ ಫಿಲ್ಮ್ಸ್ ಈ ಸಿನಿಮಾವನ್ನು ವಿತರಣೆ ಮಾಡುತ್ತಿದೆ ಎಂದರು.
ನಟಿ ಸುರೇಖಾ, ಇದು ತಮ್ಮ ಎರಡನೇ ಸಿನಿಮಾ ಎಂದು ಹೇಳಿ, ಎರಡು ಷೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಗಿ ತಿಳಿಸಿದರು. ತನಿಷಾ ಕುಪ್ಪಂಡ, ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಇದೇ ಮೊದಲ ಬಾರಿಗೆ ಎಂದರು. ಚಿತ್ರದ ಬಗ್ಗೆ ಕಾರ್ಯಕಾರಿ ನಿರ್ಮಾಪಕ ರಾಟೆ ಕುಮಾರ್, ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಹಾಗೂ ನಟ ಶೋಭನ್ ಕೂಡ ಮಾತನಾಡಿದರು. ವಿಜಯ್ ಗುಮ್ಮಿನೇನಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಕಾರ್ಯಕ್ರಮಕ್ಕೆ ಡಾಗ್ ಸತೀಶ್, ಕಿರಣ್ ಕುಮಾರ್ ಹಾಗೂ ರಾಜೇಶ್ ಅತಿಥಿಗಳಾಗಿ ಉಪಸ್ಥಿತರಿದ್ದರು.