ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜೀವನ, ಆದರ್ಶಗಳು ಹಾಗೂ ದೂರದೃಷ್ಟಿಯ ಚಿಂತನೆಗಳನ್ನು ತೆರೆಗೆ ತರುತ್ತಿರುವ ‘ಕೆಂಪಾಂಬುಧಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಪ್ರಸ್ತುತಪಡಿಸಿರುವ ಈ ಚಿತ್ರಕ್ಕೆ ಹೊಂಬಾಳೆ ಮ್ಯೂಸಿಕ್ ಸಹಯೋಗ ನೀಡಿದೆ.
ಜನಪರ ಆಡಳಿತಗಾರ ಹಾಗೂ ಪರಿಸರದ ಮಹತ್ವವನ್ನು ಶತಮಾನಗಳ ಹಿಂದೆಯೇ ಅರಿತಿದ್ದ ಕೆಂಪೇಗೌಡರ ಚಿಂತನೆಗಳು ಇಂದಿಗೂ ಬೆಂಗಳೂರಿನ ಅಸ್ತಿತ್ವದ ಭಾಗವಾಗಿವೆ. ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿ ಆಧಾರಿತವಾಗಿರುವ ‘ಕೆಂಪಾಂಬುಧಿ’ ಇತಿಹಾಸ, ಜನಪದ, ದಂತಕಥೆಗಳು ಹಾಗೂ ಸಾಂಸ್ಕೃತಿಕ ನೆನಪುಗಳನ್ನು ಒಟ್ಟುಗೂಡಿಸಿ ರೂಪುಗೊಂಡಿದೆ.
ಕೇವಲ ಐತಿಹಾಸಿಕ ಕಥೆಯಾಗಿ ಉಳಿಯದೆ, ಹಳೆಯ ಬೆಂಗಳೂರು ಮತ್ತು ಇಂದಿನ ನಗರ ಜೀವನದ ನಡುವಿನ ಸಂಪರ್ಕವನ್ನು ತೋರಿಸುವ ಪ್ರಯತ್ನವನ್ನು ಸಿನಿಮಾ ಮಾಡಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಕಳೆದುಹೋಗುತ್ತಿರುವ ಹಸಿರು ಪರಂಪರೆ, ಪರಿಸರ ಸಂರಕ್ಷಣೆ ಹಾಗೂ ನಗರದ ಮೂಲ ಮೌಲ್ಯಗಳ ಬಗ್ಗೆ ಗಮನ ಸೆಳೆಯುವ ಉದ್ದೇಶವನ್ನು ಚಿತ್ರ ಹೊಂದಿದೆ.
ನೆನಪಿರಲಿ ಪ್ರೇಮ್, ಮೇಘನಾ ಗಾಂವ್ಕರ್, ರಾಜೇಶ್ ನಟರಂಗ, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಮೇಶ್ ಬೇಗಾರ್ ನಿರ್ದೇಶನದ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದು, ಶಶೀರ್ ಶೃಂಗೇರಿ ಛಾಯಾಗ್ರಹಣ ಹಾಗೂ ಅವಿನಾಶ್ ಶೃಂಗೇರಿ ಸಂಕಲನ ಮಾಡಿದ್ದಾರೆ.
‘ಕೆಂಪಾಂಬುಧಿ’ ಮೂಲಕ ಕರ್ನಾಟಕದ ಇತಿಹಾಸ ಮತ್ತು ಬೆಂಗಳೂರಿನ ಪರಂಪರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾದ ಟೀಸರ್ ನಾಡಪ್ರಭು ಕೆಂಪೇಗೌಡರಿಗೆ ಸಲ್ಲಿಸಿರುವ ಸಿನಿ ನಮನವಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.