Cinema News

ಲೋಕಲ್ ಹುಡುಗರ ಕಥೆ ಕಾಗೆಮೊಟ್ಟೆ

Published

on

ಇತ್ತೀಚೆಗೆ ನಡೆದ ಕಾಗೆಮೊಟ್ಟೆ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಾಕಷ್ಟು ವಿವರ ಹಂಚಿಕೊಂಡಿತು. ನಟ ಜಗ್ಗೇಶ್, ಪರಿಮಳಾ ಜಗ್ಗೇಶ್, ಪುತ್ರ ಹಾಗೂ ಚಿತ್ರದ ನಾಯಕ ಗುರುರಾಜ್ ನಿರ್ಮಾಪಕ, ನಿರ್ದೇಶಕ ಚಂದ್ರಹಾಸ್ ಸಿನಿಮಾ ಕುರಿತಂತೆ ಮಾತನಾಡಿದರು. ಈಗ ಥೇಟರ್‌ಗಳಲ್ಲಿ ೧೦೦% ಎಂಟ್ರಿಗೆ ಸರ್ಕಾರ ಅವಕಾಶ ನೀಡಿದೆ, ಹಾಗಾಗಿ ದೊಡ್ಡದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ, ಅದರಲ್ಲಿ ನನ್ನ ಮಗ ಅಭಿನಯಿಸಿದ ಕಾಗೆಮೊಟ್ಟೆ ಕೂಡ ಇದೆ, ಇದೊಂದು ಕಂಟೆಂಟ್ ಸಿನಿಮಾ ಗ್ಲಾಮರ್‌ಗೆ ಅವಕಾಶವಿಲ್ಲ, ನಾನು ಚಿಕ್ಕವನಿದ್ದಾಗ ಶ್ರೀರಾಂಪುರದಲ್ಲಿ ತುಂಬಾ ರೌಡಿಗಳನ್ನು ನೋಡಿದ್ದೇನೆ, ಅವರಿಗೂ ಎಲ್ಲೋ ಒಂದು ಲವ್ ಇರುತ್ತಿತ್ತು, ಅಂಥದೇ ಕಂಟೆಂಟ್ ಈ ಸಿನಿಮಾದಲ್ಲಿದೆ. ನನಗೆ ಬಹಳ ಇಷ್ಟವಾಯಿತು. ಮಿರ್ಜಾಪುರ್ ಅಂಥ ಸಿನಿಮಾ ನೀವು ನೋಡಿರುತ್ತೀರಿ. ಆದೇ ಮಾದರಿಯ ಚಿತ್ರವಿದು. ನಿರ್ದೇಶಕರು ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನನ್ನ ಜೀವನದಲ್ಲಿ ತುಂಬಾ ಸೋಮಾರಿ ನಿರ್ದೇಶಕರೊಟ್ಟಿಗೂ ಕೆಲಸ ಮಾಡಿದ್ದೇನೆ. ಆದರೆ ಈ ಹುಡುಗ ಬಹಳ ಚೆನ್ನಾಗಿ, ತಮ್ಮ ಬೆವರಹನಿ ಬಸಿದು ಕೆಲಸ ಮಾಡಿದ್ದಾನೆ, ಸ್ಲಂನಲ್ಲಿ ಶೂಟ್ ಮಾಡುವುದು ತುಂಬಾ ಕಷ್ಟ, ಚಂದ್ರಹಾಸ ಇಂಥ ಎಲ್ಲ ರಿಸ್ಕ್ಗಳನ್ನು ತೆಗೆದುಕೊಂಡು ಈ ಚಿತ್ರ ಮಾಡಿದ್ದಾರೆ. ನನ್ನ ಮಗ ಗುರುರಾಜ್ ನನಗಾಗಿ ಒಂದೊಳ್ಳೇ ಕಥೆ ಮಾಡಿದ್ದಾನೆ. ಅದನ್ನು ಆತನೇ ನಿರ್ದೇಶಿಸುತ್ತಿದ್ದಾನೆ ಎದು ಪುತ್ರನ ಕುರಿತು ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

 

 

ಚಿತ್ರಕ್ಕೆ ಡೈಲಾಗ್ ಬರೆದ ನಾಗೇಂದ್ರ ಪ್ರಸಾದ್ ಮಾತನಾಡಿ ತುಂಬಾ ದಿನಗಳ ನಂತರ ಡೈಲಾಗ್ ಬರೆದಂಥ ಚಿತ್ರವಿದು. ಸೊಳ್ಳೆ ಕೆಚ್ಚಲಿನ ಮೇಲಿದ್ದರೂ ಅದು ಕುಡಿಯೋದು ರಕ್ತಾನೇ, ಹಾಲನ್ನಲ್ಲ, ಈ ಥರದ ಒಳ್ಳೊಳ್ಳೇ ಮಾತುಗಳು ಈ ಚಿತ್ರದಲ್ಲಿವೆ, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು. ಯಾವುದೇ ಹಂಗಿಲ್ಲದೆ ಬೆಳೆದ ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ ಚಂದ್ರಹಾಸ ಕಾಗೆಮೊಟ್ಟೆ ಸಿನಿಮಾ ಮಾಡಿದ್ದಾರೆ. ಈ ಹಿಂದೆ ಕುಂಭರಾಶಿ ನಿರ್ದೇಶಿಸಿದ್ದ ಚಂದ್ರಹಾಸ ಅವರಿಗಿದು ಎರಡನೇ ಚಿತ್ರ, ನೂರರಿಂದ ನೂರಿಪ್ಪತ್ತು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸಿನಿಮಾ ಅಂದಮೇಲೆ ಕಷ್ಟಪಡಲೇಬೇಕು, ಒಂದೊಳ್ಳೆ ಸಿನಿಮಾ ಮಾಡಿದ್ದೇವೆ, ನೋಡಿ ಹರಸಿ ಎಂದು ತಮ್ಮ ಚಿತ್ರದ ಕುರಿತಂತೆ ಮಾತನಾಡಿದರು.

 

 

ಕಾಗೆಮೊಟ್ಟೆ ಲಾಕ್‌ಡೌನ್‌ಗೂ ಮುಂಚೆಯೇ ರೆಡಿಯಾದ ಚಿತ್ರ. ಈ ಸಿನಿಮಾದಲ್ಲಿ ಜಗ್ಗೇಶ್ ಹಿರಿಯಪುತ್ರ ಗುರುರಾಜ್ ಮೂವರು ಹುಡುಗರಲ್ಲಿ ಒಬ್ಬನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕೆ.ಮಾದೇಶ್ ಹಾಗೂ ಹೇಮಂತ್ ಚಿತ್ರದಲ್ಲಿದ್ದಾರೆ. ಚಿತ್ರದ ನಾಯಕಿಯ ಪಾತ್ರದಲ್ಲಿ ತನುಜಾ ನಟಿಸಿದ್ದಾರೆ, ಚಿತ್ರಕ್ಕೆ ಬಿ.ಕೆ.ಚಂದ್ರಹಾಸ್ ಅವರೇ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ, ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಕೈಜೋಡಿಸಿದ್ದಾರೆ. ಪಿಳ್ಳಾ, ಗೋವಿ ಕೃಷ್ಣನ ಕಥೆ ಎನ್ನುವ ಟ್ಯಾಗ್‌ಲೈನ್ ಈ ಚಿತ್ರಕ್ಕಿದೆ. ನಾಯಕ ಗುರುರಾಜ್ ಮಾತನಾಡಿ ನನ್ನ ತಂದೆ, ತಾಯಿ ನೋಡಿಕೊಂಡು ಬೆಳೆದವನು ನಾನು, ಪ್ರತಿಯೊಬ್ಬರಿಗೂ ಒಂದೊಂದು ಲೈಫ್ ಅಂತ ಇರುತ್ತದೆ, ಸ್ನೇಹದ ಬೆಲೆ ಏನೆಂಬುದೇ ಸಿನಿಮಾದ ಥೀಮ್, ಸ್ನೇಹಸಂಬಂಧದ ಕಥೆಯಿರೋ ಚಿತ್ರಗಳು ಯಾವತ್ತೂ ಹೊಸದಾಗಿರುತ್ತವೆ ಎಂದು ಹೇಳಿದರು.

 

 

ಹಳ್ಳಿಯಲ್ಲಿ ಯಾರ ಹಂಗೂ ಇಲ್ದೆ ಬೆಳೆದ ಮೂವರು ಹುಡುಗರು ಒಂದು ಕಾರ್ಯಸಾಧನೆಗೆ ಬೆಂಗಳೂರಿಗೆ ಆಗಮಿಸುತ್ತಾರೆ, ಯಾವ ಹಿನ್ನೆಲೆ ಇಲ್ಲದೆ ಸಿಟಿಗೆಬಂದ ಇವರು ತಾವಂದುಕೊಂಡಿದ್ದನ್ನು ಮಾಡಿದರೇ, ಇಲ್ಲವೇ ಎನ್ನುವುದೇ ಚಿತ್ರದ ಕಥಾಹಂದರ. ಈ ಹುಡುಗರಿಗೆ ಸಪೋರ್ಟಿವ್ ಆಗಿರುವಂಥ ವೇಶ್ಯೆಯೊಬ್ಬಳ ಪಾತ್ರವನ್ನು ಸೌಜನ್ಯ ನಿರ್ವಹಿಸಿದ್ದಾರೆ. ಶ್ರೀವತ್ಸ ಚಿತ್ರದ ೨ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯನಟ ಶರತ್ ಲೋಹಿತಾಶ್ವ ಖಳನಾಯಕನಾಗಿದ್ದು, ಸತ್ಯಜಿತ್, ಪೊನ್ನಂಬಲಂ ಅಲ್ಲದೆ ರಜನೀಕಾಂತ್ ಆಪ್ತ ರಾಜ್‌ಬಹದೂರ್ ಮುಸ್ಲಿಂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

Spread the love
Click to comment

Copyright © 2019 PopcornKannada.com