Cinema News

‘ಜೋಡೆತ್ತು’ಗಳ ಅಂತಿಮ ಹಣಾಹಣಿ.. ಎರಡನೇ ಹಂತದ ಚಿತ್ರೀಕರಣ ಮುಗಿಸಿದ ಚಿತ್ರತಂಡ

Published

on

ಚಿಕ್ಕಣ್ಣ ಹಾಗೂ ತೆಲುಗಿನ ಸುನಿಲ್ ಪ್ರಮುಖ ಪಾತ್ರದಲ್ಲಿರುವ ಜೋಡೆತ್ತು ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಛಾಯಾಗ್ರಾಹಕ ಸುಧಾಕರ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಒಟ್ಟಾರೆ ೬೮ ದಿನಗಳ ಕಾಲ, ಶೇ. ೮೦ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾರೇಕಟ್ಟೆಯಲ್ಲಿ ಎರಡನೇ ಹಂತದ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ೯೦ರ ದಶಕದ ಹಳ್ಳಿ ಸೆಟ್ ಹಾಕಲಾಗಿದ್ದು, ಅಲ್ಲಿಯೇ ಸಾಕಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಚಿಕ್ಕಮಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ ಬಳಿಕ, ಕನಕಪುರದಲ್ಲಿ ಒಂದು ಫೈಟ್ ಚಿತ್ರೀಕರಿಸಿಕೊಳ್ಳಲಾಗಿತ್ತು. ಆನಂತರ ೨೫ ದಿನಗಳ ಕಾಲ ಬಹುತೇಕ ಎಲ್ಲಾ ಕಲಾವಿದರು ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ಭರ್ಜರಿ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಅದಕ್ಕಾಗಿ ಬೃಹತ್ ಸೆಟ್ ಹಾಕಿಸುತ್ತಿದೆ. ‘ಜೋಡೆತ್ತು’ಗಳ ಅಂತಿಮ ಹಂತದ ಹಣಾಹಣಿ ಸಾಹಸ ಸಂಯೋಜಕ ಅರ್ಜುನ್ ಸಾರಥ್ಯದಲ್ಲಿ ಮೂಡಿಬರಲಿದೆ.

 

 

 

 

 

ಮಹೇಶ್ ದೇವ್ ಡಿ.ಎನ್ ಪುರ ಕಥೆಗೆ ಸುಧಾಕರ್ ಎಸ್. ರಾಜ್ ಮತ್ತವರ ತಂಡ ಚಿತ್ರಕಥೆ ಬರೆದಿದೆ. ಆಕಾಶ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ.ಸೋಮಶೇಖರ್ (ಕಟ್ಟಿಗೇನಹಳ್ಳಿ) ಅದ್ಧೂರಿಯಾಗಿ ಜೋಡೆತ್ತು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು, ಅದಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಕೆ.ಎಲ್.ರಾಜಶೇಖರ್ ಹಾಗೂ ರಘು ನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲೂ ‘ಜೋಡೆತ್ತು’ ದರ್ಶನವಾಗಲಿದೆ.

 

 

 

 

 

 

ಅಧ್ಯಕ್ಷ, ರಾಬರ್ಟ್, ಕಾಟೇರ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಛಾಯಾಗ್ರಹಕರಾಗಿದ್ದ ಸುಧಾಕರ್ ರಾಜ್ ‘ಜೋಡೆತ್ತು’ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸೆಂಟಿಮೆಂಟ್, ಆಕ್ಷನ್, ಕಾಮಿಡಿ ಅಂಶಗಳು ಅಡಕವಾಗಿರುವ ಈ ಚಿತ್ರದಲ್ಲಿ ನಿಜವಾದ ‘ಜೋಡೆತ್ತು’ ಯಾರು ಎಂಬುದು ಸಿನಿಮಾದಲ್ಲಿ ಅನಾವರಣಗೊಳಿಸುವ ಆಲೋಚನೆ ಚಿತ್ರತಂಡಕ್ಕಿದೆ. ಇದೇ ವರ್ಷ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ನಿರ್ಮಾಪಕರಿಗಿದೆ.

 

ರಮೇಶ್ ಭಟ್, ರಂಗಾಯಣ ರಘು, ಕಲ್ಯಾಣಿ, ಶಿವರಾಜ್ ಕೆ.ಆರ್ ಪೇಟೆ, ಕುರಿ ಪ್ರತಾಪ್ ಹಾಗೂ ಧರ್ಮಣ್ಣ ಕಡೂರು ಸೇರಿದಂತೆ ತಾರಾದಂಡೇ ಈ ಚಿತ್ರದಲ್ಲಿದೆ

Spread the love
Click to comment

Copyright © 2019 PopcornKannada.com