Cinema News
ಸುಜಯ್ ಶಾಸ್ತ್ರಿ ನಿರ್ದೇಶನದ “ಎಲ್ರ ಕಾಲೆಳಿಯತ್ತೆ ಕಾಲ” ಏಪ್ರಿಲ್ 17ರಂದು ಪ್ರೇಕ್ಷಕರ ಮುಂದೆ
“ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸಿನಿರಸಿಕರ ಗಮನ ಸೆಳೆದಿದೆ. 90ರ ದಶಕದ ರೆಟ್ರೊ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರದ ಕಥಾಹಂದರ ವಿಭಿನ್ನವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರ ಏಪ್ರಿಲ್ 17ರಂದು ತೆರೆಗೆ ಬರಲು ಸಜ್ಜಾಗಿದೆ. ಕುಟುಂಬ ಸಮೇತವಾಗಿ ನೋಡಬಹುದಾದ ಮನರಂಜನಾತ್ಮಕ ಹಾಗೂ ಸಂದೇಶಭರಿತ ಚಿತ್ರವೆಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ನಿರ್ದೇಶಕ ಸುಜಯ್ ಶಾಸ್ತ್ರಿ ಅವರು ಮಾತನಾಡಿ, ಕಥೆಗೆ ತಕ್ಕ ನಾಯಕನಾಗಿ ಚಂದನ್ ಶೆಟ್ಟಿಯನ್ನು ಆಯ್ಕೆ ಮಾಡಲಾಗಿದೆ ಎಂದರು. ಚಿತ್ರೀಕರಣಕ್ಕೂ ಮುನ್ನ ಸಾಕಷ್ಟು ಪೂರ್ವತಯಾರಿ ನಡೆಸಿದ್ದು, ಚಂದನ್ ಶೆಟ್ಟಿ ತಮ್ಮ ಪಾತ್ರಕ್ಕಾಗಿ ಹೆಚ್ಚಿನ ಶ್ರಮ ಪಟ್ಟಿದ್ದಾರೆ ಎಂದು ಹೇಳಿದರು. ರಾಜಗುರು ಹೊಸಕೋಟೆ ಬರೆದಿರುವ ಕಥೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ನಾಯಕನಾಗಿ ಇದು ತನ್ನ ಮೊದಲ ಚಿತ್ರವಾಗಿರುವುದರಿಂದ ಚಂದನ್ ಶೆಟ್ಟಿಗೆ ಇದು ವಿಶೇಷ. ಕಥೆಯೇ ಅವರನ್ನು ಸೆಳೆದಿದ್ದು, ರಂಗಭೂಮಿ ಹಿನ್ನೆಲೆಯ ತಂಡದಿಂದ ಸಾಕಷ್ಟು ಕಲಿತಿದ್ದಾಗಿ ಹೇಳಿದರು. ಟ್ರೇಲರ್ಗೆ ಸಿಕ್ಕ ಉತ್ತಮ ಪ್ರತಿಕ್ರಿಯೆ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಗೋವಿಂದರಾಜು ನಿರ್ಮಿಸಿರುವ ಈ ಚಿತ್ರವನ್ನು KVN ಸಂಸ್ಥೆ ವಿತರಿಸುತ್ತಿದ್ದು, ನಾಯಕಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಇತರ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಯಶಸ್ಸಿನ ಬಗ್ಗೆ ವಿಶ್ವಾಸ ಹೊಂದಿದ್ದಾರೆ.