Cinema News

ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಟ್ರೇಲರ್ ಬಿಡುಗಡೆ; ವಿನಯ್ ರಾಜ್‌ಕುಮಾರ್‌ಗೆ ಶಿವಣ್ಣನ ಸಾಥ್

Published

on

ಸ್ಯಾಂಡಲ್‌ವುಡ್‌ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಿರ್ದೇಶನದ ಬಹುನಿರೀಕ್ಷಿತ ‘ಸಿಟಿ ಲೈಟ್ಸ್’ ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ವಿನಯ್ ರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಪುತ್ರಿ ಮೋನಿಷಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸೆಪ್ಟೆಂಬರ್ 18ರಂದು ಚಿತ್ರ ತೆರೆಗೆ ಬರಲಿದ್ದು, ಟ್ರೇಲರ್‌ನಲ್ಲಿ ಸಿನಿಮಾದ ಕಥಾಹಂದರದೊಂದಿಗೆ ಮಾಸ್, ಕ್ರೈಂ ಹಾಗೂ ಆ್ಯಕ್ಷನ್ ಅಂಶಗಳ ಝಲಕ್ ಕಾಣಿಸಿಕೊಂಡಿದೆ. ವಿನಯ್ ರಾಜ್‌ಕುಮಾರ್ ಈ ಚಿತ್ರದಲ್ಲಿ ಹಿಂದೆಂದೂ ಕಾಣಿಸದ ರೀತಿಯಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಲಾಂಗ್ ಹಿಡಿದು ಅಬ್ಬರಿಸಿರುವುದು ಗಮನ ಸೆಳೆಯುತ್ತಿದೆ.

 

‘ಸಿಟಿ ಲೈಟ್ಸ್’ ಮೂಲಕ ವಿನಯ್ ರಾಜ್‌ಕುಮಾರ್ ಅವರಿಗೆ ‘ಸ್ಯಾಂಡಲ್ ಮಯೂರ’ ಎಂಬ ಹೊಸ ಬಿರುದು ಕೂಡ ದೊರೆತಿದೆ. ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಭೂಗತ ಲೋಕದ ಕಥೆಗಳೆಂದರೆ ತಮ್ಮ ಹೆಸರು ನೆನಪಾಗುತ್ತದೆ ಎಂಬ ಮಾತಿದೆ. ಇನ್ನು ಮುಂದೆ ಅಂತಹ ಸಿನಿಮಾಗಳ ವಿಚಾರ ಬಂದಾಗ ತಮ್ಮೊಂದಿಗೆ ವಿನಯ್ ಹೆಸರೂ ಕೇಳಿಬರಲಿದೆ ಎಂದರು. ಕೇವಲ ಕುಟುಂಬದ ಸಂಬಂಧದ ಕಾರಣಕ್ಕೆ ತಾನು ಸಿನಿಮಾವನ್ನು ಬೆಂಬಲಿಸುತ್ತಿಲ್ಲ, ವಿನಯ್‌ನಲ್ಲಿ ಉತ್ತಮ ಪ್ರತಿಭೆಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದುನಿಯಾ ವಿಜಯ್ ‘ಸಲಗ’ ಮತ್ತು ‘ಭೀಮ’ ಚಿತ್ರಗಳಿಂದ ‘ಸಿಟಿ ಲೈಟ್ಸ್’ವರೆಗೆ ತಾಂತ್ರಿಕವಾಗಿ ಉತ್ತಮ ಬೆಳವಣಿಗೆ ಕಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಸಂತಸದ ವಿಚಾರ. ಮಾಸ್ತಿ ಅವರ ಸಂಭಾಷಣೆ ಕೂಡ ಚೆನ್ನಾಗಿದೆ ಎಂದು ಶಿವಣ್ಣ ಪ್ರಶಂಸಿಸಿದರು. ಗೀತಾ ಶಿವರಾಜ್ ಕುಮಾರ್ ಕೂಡ ಟ್ರೇಲರ್ ವೀಕ್ಷಿಸಿ ‘ಓಂ’ ಚಿತ್ರದ ನೆನಪು ಮೂಡುತ್ತಿದೆ. ವಿನಯ್ ಅವರನ್ನು ವಿಭಿನ್ನವಾಗಿ ತೋರಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

 

 

 

 

 

ಮೋನಿಷಾ ಮಾತನಾಡಿ, ತನ್ನ ಮೇಲಿನ ನಂಬಿಕೆಯಿಂದ ಇಂತಹ ಮಹತ್ವದ ಪಾತ್ರವನ್ನು ನೀಡಿದ ತಂದೆ ಹಾಗೂ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು. ತಂದೆ ದುನಿಯಾ ವಿಜಯ್ ಅವರಿಗೆ ನೀಡಿದ ಪ್ರೀತಿಯನ್ನೇ ತನಗೂ ನೀಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದರು. ವಿನಯ್ ರಾಜ್‌ಕುಮಾರ್ ಮಾತನಾಡಿ, ಹಾಡುಗಳು ಹಾಗೂ ಟ್ರೇಲರ್‌ಗೆ ಪ್ರೇಕ್ಷಕರು ನೀಡಿರುವ ಪ್ರತಿಕ್ರಿಯೆ ಖುಷಿ ತಂದಿದೆ. ಆದರೆ ಅಂತಿಮವಾಗಿ ಸಿನಿಮಾ ಹೇಗಿದೆ ಎಂಬುದನ್ನು ಪ್ರೇಕ್ಷಕರೇ ನೋಡಿ ತೀರ್ಮಾನಿಸಬೇಕು ಎಂದರು. ‘ಸಿಟಿ ಲೈಟ್ಸ್’ನಲ್ಲಿ ಬೆಂಗಳೂರಿನಲ್ಲಿ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳುತ್ತಿರುವ ಜನರ ಬದುಕನ್ನು ಹತ್ತಿರದಿಂದ ಕಂಡಿದ್ದು, ಅವರ ಬಗ್ಗೆ ತಮ್ಮ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.

 

 

 

 

 

 

ಚಿತ್ರದ ಮತ್ತೊಂದು ವಿಶೇಷವೆಂದರೆ ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಅವರ ಒತ್ತಾಸೆಯ ಮೇರೆಗೆ ಈ ಪಾತ್ರವನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ ಅವರು, ವಿನಯ್ ರಾಜ್‌ಕುಮಾರ್ ಅವರ ಸರಳತೆ ಹಾಗೂ ಪ್ರತಿಭೆಯನ್ನು ಮೆಚ್ಚಿಕೊಂಡರು. ವಿನಯ್ ಮುಂದೆ ದೊಡ್ಡ ಕಲಾವಿದನಾಗಿ ಬೆಳೆಯಲಿದ್ದಾರೆ, ಮೋನಿಷಾ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ ಎಂದು ಶ್ಲಾಘಿಸಿದರು. ಬೆಂಗಳೂರಿಗೆ ಬದುಕು ಅರಸಿ ಬರುವ ಯುವಜನರ ಸಂಕಷ್ಟ ಮತ್ತು ಬದುಕಿನ ಹೋರಾಟವನ್ನು ವಿಜಯ್ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು. ಖ್ಯಾತ ಸಂಭಾಷಣೆಕಾರ ಮಾಸ್ತಿ ಕೂಡ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಶಿವಣ್ಣ ಅವರ ಅಭಿಮಾನಿ ಪುನೀತ್ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಚರಣ್ ರಾಜ್ ಸಂಗೀತ, ಶಿವಸೇನಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸೆಪ್ಟೆಂಬರ್ 18ರಂದು ‘ಸಿಟಿ ಲೈಟ್ಸ್’ ಪ್ರೇಕ್ಷಕರ ಮುಂದೆ ಬರಲಿದೆ.

Spread the love

Copyright © 2019 PopcornKannada.com