Cinema News
ವಸಂತಕಾಲದ ಹೂವುಗಳಿಗೆ ಜೊತೆಯಾದ ಧ್ರುವ ಸರ್ಜಾ
ಸಚಿನ್ ಶೆಟ್ಟಿ ನಿರ್ದೇಶನದ ‘ವಸಂತಕಾಲದ ಹೂಗಳು’ ಚಿತ್ರವನ್ನು ನೋಡಿ ಮೆಚ್ಚಿರುವ ಧ್ರುವ ಸರ್ಜಾ ಈ ಚಿತ್ರವನ್ನು ಪ್ರೆಸೆಂಟ್ ಮಾಡುವ ಮೂಲಕ ಹೊಸ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. “ಇದು ಸಣ್ಣ ತಂಡವೊಂದು ಶ್ರದ್ಧೆಯಿಂದ ಬರಿ ಕಥೆಯನ್ನಷ್ಟೆ ನಂಬಿ ಮಾಡಿದ ಒಂದು ಅಚ್ಚುಕಟ್ಟಾದ ಚಿತ್ರ. ವಿಭಿನ್ನ ಕಂಟೆಂಟ್ ನೊಂದಿಗೆ ಬರುತ್ತಿರುವ ಹೊಸಬರ ಚಿತ್ರಗಳಿಗೆ ಉತ್ತೇಜನ ಕೊಡುವುದು ಈ ಹೊತ್ತಿನ ಅಗತ್ಯ ಎಂದು ನನಗನಿಸುತ್ತದೆ. ಹೀಗಾಗಿ ಈ ಉತ್ಸಾಹಿ ಯುವ ತಂಡಕ್ಕೆ, ಮುಖ್ಯವಾಗಿ ಒಂದು ಉತ್ತಮ ಚಿತ್ರಕ್ಕೆ ಬೆಂಬಲ ನೀಡುವ ಸಲುವಾಗಿ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ.
ಉತ್ತರ ಕರ್ನಾಟಕದ ಪರಿಸರ, ಕಾಲೇಜು ದಿನಗಳು, ತರಲೆ ಫ್ರೆಂಡ್ಸ್, ಮುದ್ದಾದ ಲವ್ ಸ್ಟೋರಿಗಳು ಇದನ್ನೆಲ್ಲ ನೀವು ಈ ಚಿತ್ರದಲ್ಲಿ ನೋಡಬಹುದು. ನಿಮ್ಮ ಟೀನೇಜ್ ಲೈಫ್ ಗೆ ಮತ್ತೆ ಹೋಗಿ ಆ ನೆನಪುಗಳನ್ನು ಮೆಲುಕು ಹಾಕೋ ಹಾಗೆ ಈ ಚಿತ್ರ ಮಾಡುತ್ತದೆ ಎನ್ನುವ ನಂಬಿಕೆ ನನಗಿದೆ” ಎನ್ನುತ್ತಾರೆ ಧ್ರುವ ಸರ್ಜಾ.
“ಒಂದು ಚಿತ್ರವನ್ನು ತಯಾರಿಸುವುದು ಎಷ್ಟು ಕಷ್ಟವೋ ಅದಕ್ಕಿಂತ ಹೆಚ್ಚಿನ ಕಷ್ಟ ಜನರಿಗೆ ಆ ಚಿತ್ರವನ್ನು ತಲುಪಿಸುವುದರಲ್ಲಿದೆ. ಈ ನಿಟ್ಟಿನಲ್ಲಿ ನಾವು ಚಿತ್ರವನ್ನು ಪ್ರೆಸೆಂಟ್ ಮಾಡಲು ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿದೆವು. ಚಿತ್ರದ ಕಂಟೆಂಟ್ ಮೆಚ್ಚಿ ಅವರು ಚಿತ್ರವನ್ನು ಪ್ರೆಸೆಂಟ್ ಮಾಡಲು ಮುಂದೆ ಬಂದರು. ಇದು ನಮ್ಮ ಇಡೀ ತಂಡಕ್ಕೆ ಹೊಸ ಹುಮ್ಮಸ್ಸು ತಂದಿದೆ. ಇದೇ ಉತ್ಸಾಹದಲ್ಲಿ ನವೆಂಬರ್ 10ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ” – ನಿರ್ದೇಶಕ ಸಚಿನ್ ಶೆಟ್ಟಿ. ವಸಂತಕಾಲದ ಹೂಗಳು ಚಿತ್ರದಲ್ಲಿ ಸಚಿನ್ ರಾಠೋಡ್ ಮತ್ತು ರಾಧಾ ಭಗವತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅಶೋಕ ರಾಠೋಡ್ ಹಾಗೂ ಸಿದ್ದು ರಸೂರೆ ನಿರ್ಮಾಣ ಮಾಡಿದ್ದಾರೆ. ಟೀನೇಜ್ ಲವ್ ಸ್ಟೋರಿ ಹೊಂದಿರುವ ಈ ಚಿತ್ರ ಸಂಪೂರ್ಣವಾಗಿ ಬಿಜಾಪುರದಲ್ಲಿ ಚಿತ್ರಿಕರಣಗೊಂಡಿದೆ.