Cinema News
ಧೀರನ್ ರಾಮ್ಕುಮಾರ್ ‘ಪಬ್ಬಾರ್’ ಚಿತ್ರೀಕರಣ ಪೂರ್ಣ; ಶೀಘ್ರದಲ್ಲೇ ಬೆಳ್ಳಿತೆರೆಗೆ
ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಧೀರನ್ ರಾಮ್ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಪಬ್ಬಾರ್’ ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ‘ಶಾಖಾಹಾರಿ’ ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಸಂದೀಪ್ ಸುಂಕದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ಕುಮಾರ್ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಸಿನಿಮಾ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಪ್ರವೇಶಿಸಿದೆ.
‘ಪಬ್ಬಾರ್’ ಚಿತ್ರದ ಶೂಟಿಂಗ್ ಬೆಂಗಳೂರು, ಮೈಸೂರು, ಮಡಿಕೇರಿ ಸೇರಿದಂತೆ ವಿವಿಧ ಸುಂದರ ತಾಣಗಳಲ್ಲಿ ನಡೆದಿದೆ. ಇದರೊಂದಿಗೆ ಹಿಮಾಚಲ ಪ್ರದೇಶದ ಮನಮೋಹಕ ಪರಿಸರದಲ್ಲೂ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಧೀರನ್ ರಾಮ್ಕುಮಾರ್ ಈ ಸಿನಿಮಾದಲ್ಲಿ ಈ ಹಿಂದೆ ಕಾಣಿಸಿಕೊಳ್ಳದ ರೀತಿಯ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದು, ಅವರ ವಿಭಿನ್ನ ಲುಕ್ ಹಾಗೂ ಪಾತ್ರದ ಬಗ್ಗೆ ಕುತೂಹಲ ಮೂಡಿದೆ. ನಾಯಕಿಯಾಗಿ ಅಮೃತಾ ಪ್ರೇಮ್ ನಟಿಸಿದ್ದು, ಧೀರನ್-ಅಮೃತಾ ಜೋಡಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದೆ.
ಹಿಮಾಚಲ ಪ್ರದೇಶದ ಪಬ್ಬಾರ್ ಕಣಿವೆಯನ್ನು ಹಿನ್ನೆಲೆಯಾಗಿಸಿಕೊಂಡಿರುವ ಈ ಸಿನಿಮಾ ಅಡ್ವೆಂಚರಸ್ ಕ್ರೈಮ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಕೆ.ಜಿ.ಎಫ್ ಖ್ಯಾತಿಯ ಅಯ್ಯಪ್ಪ ಶರ್ಮ, ಅಚ್ಯುತ್ ಕುಮಾರ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜನೆ ಮಾಡಿದ್ದು, ವಿಶ್ವಜಿತ್ ರಾವ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಚಿತ್ರೀಕರಣ ಪೂರ್ಣಗೊಂಡಿರುವ ಬೆನ್ನಲ್ಲೇ ‘ಪಬ್ಬಾರ್’ ತಂಡ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಕ್ಯಾರೆಕ್ಟರ್ ಟೀಸರ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, ಧೀರನ್ ಅವರ ಹೊಸ ಅವತಾರ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ. ಸದ್ಯ ಚಿತ್ರದ ಬಿಡುಗಡೆ ದಿನಾಂಕದತ್ತ ಎಲ್ಲರ ಗಮನ ನೆಟ್ಟಿದ್ದು, ಶೀಘ್ರದಲ್ಲೇ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅದ್ದೂರಿಯಾಗಿ ಘೋಷಿಸಲಿದೆ.