Cinema News
ಮೇ 16ರಂದು ಬೆಂಗಳೂರಿನಲ್ಲಿ ಅಜನೀಶ್ ಲೋಕನಾಥ್ ಮ್ಯೂಸಿಕ್ ಫೆಸ್ಟ್
ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಬಿ. ಅಜನೀಶ್ ಲೋಕನಾಥ್ ಇದೀಗ ಕನ್ನಡದ ಮೊದಲ ಲೈವ್ ಮ್ಯೂಸಿಕ್ ಕಾನ್ಸರ್ಟ್ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ‘ಉಳಿದವರು ಕಂಡಂತೆ’, ‘ರಂಗಿತರಂಗ’, ‘ಕಿರಿಕ್ ಪಾರ್ಟಿ’, ‘ವಿಕ್ರಾಂತ್ ರೋಣ’, ‘ಕಾಂತಾರ’, ‘ಬೆಲ್ ಬಾಟಂ’, ‘ಅವನೇ ಶ್ರೀಮನ್ನಾರಾಯಣ’ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಿಗೆ ಸಂಗೀತ ನೀಡಿರುವ ಅಜನೀಶ್, ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ.
ಈ ತಿಂಗಳ 16ರಂದು ಬೆಂಗಳೂರಿನ ಭಾರತೀಯ ಮಾಲ್ನಲ್ಲಿ ಈ ಮೆಗಾ ಮ್ಯೂಸಿಕ್ ಕಾನ್ಸರ್ಟ್ ನಡೆಯಲಿದೆ. ಕಾರ್ಯಕ್ರಮದ ಕುರಿತು ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಜನೀಶ್ ಲೋಕನಾಥ್, ಲಹರಿ ಸಂಸ್ಥೆಯ ವೇಲು ಸೇರಿದಂತೆ ಹಲವರು ಭಾಗವಹಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜನೀಶ್ ಲೋಕನಾಥ್, 2023ರಿಂದ ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿ ಕೆಲಸ ಆರಂಭಿಸಿದ್ದು, ಕೆ. ಕಲ್ಯಾಣ್ ಅವರೊಂದಿಗೆ ಸೆಷನ್ ಮ್ಯೂಸಿಷಿಯನ್ ಹಾಗೂ ಅರೆಂಜರ್ ಆಗಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. ಹಲವು ವರ್ಷಗಳ ಪರಿಶ್ರಮದ ನಂತರ 2009ರಲ್ಲಿ ಮೊದಲ ಸಿನಿಮಾ ಬಿಡುಗಡೆಯಾಗಿದ್ದು, ‘ಉಳಿದವರು ಕಂಡಂತೆ’ ತಮ್ಮ ಬದುಕಿನ ಟರ್ನಿಂಗ್ ಪಾಯಿಂಟ್ ಎಂದು ಹೇಳಿದರು. ಉತ್ತಮ ಹಾಡುಗಳನ್ನು ನೀಡುವುದೇ ತಮ್ಮ ಗುರಿಯಾಗಿದ್ದು, ಇದೀಗ ಅದೇ ಪ್ರೀತಿಯಿಂದ ಮ್ಯೂಸಿಕ್ ಕಾನ್ಸರ್ಟ್ ಆಯೋಜಿಸುತ್ತಿರುವುದಾಗಿ ತಿಳಿಸಿದರು.
ಈ ಕಾನ್ಸರ್ಟ್ನಲ್ಲಿ ಕೇವಲ ಹಾಡುಗಳಷ್ಟೇ ಅಲ್ಲದೆ ವಿಶೇಷ ಪರ್ಫಾರ್ಮೆನ್ಸ್ ಮತ್ತು ವಿಷ್ಯುವಲ್ಸ್ ಕೂಡ ಇರಲಿವೆ. ವಿಜಯ್ ಪ್ರಕಾಶ್, ಮಂಗ್ಲಿ, ನಕಾಶ್ ಅಜೀಜ್, ಅನನ್ಯ ಭಟ್, ಸಾನ್ವಿ ಸುದೀಪ್, ಸಂಜಿತ್ ಹೆಗ್ಡೆ, ಹರಿಶಂಕರ್, ಅಬ್ಬಿ ವಿ, ವಾಸುಕಿ ವೈಭವ್, ಅನಿರುದ್ಧ್ ಶಾಸ್ತ್ರಿ, ಐಶ್ವರ್ಯ ರಂಗರಾಜನ್ ಸೇರಿದಂತೆ ಅನೇಕ ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.