Cinema News
ಮೂರು ಕೈದಿಗಳ ರೋಚಕ ಕಥೆ; ‘ಅಪರಾಧಿ ನಾನಲ್ಲ’ ಸಿನಿಮಾದ ಟ್ರೇಲರ್ ರಿಲೀಸ್
ಮೂವರು ಕೈದಿಗಳ ಜೀವನದ ಸುತ್ತ ಸಾಗುವ ವಿಭಿನ್ನ ಕಥಾಹಂದರ ಹೊಂದಿರುವ ‘ಅಪರಾಧಿ ನಾನಲ್ಲ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜೈಲಿನಲ್ಲಿರುವ ಮೂವರು ಕೈದಿಗಳು ಅಲ್ಲಿಂದ ಹೇಗೆ ಹೊರಬರುತ್ತಾರೆ ಎಂಬ ಕುತೂಹಲದ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಒಂದು ಕೊಲೆಯ ಹಿನ್ನೆಲೆಯಲ್ಲಿನ ರೋಚಕ ಘಟನೆಗಳನ್ನು ತೆರೆದಿಡುತ್ತದೆ. ಸಿನಿಮಾ ಜುಲೈ 3ರಂದು ಬಿಡುಗಡೆಯಾಗಲಿದೆ.
SLV ಕಲರ್ಸ್ ಮತ್ತು ಅನುಗ್ರಹ ಫಿಲ್ಮ್ಸ್ ಬ್ಯಾನರ್ನಲ್ಲಿ ಅಜಿತ್ ಚೌಟಾ ದೇವಸ್ಯ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಯಶಂತ್ ಕಲ್ಲಡ್ಕ ನಿರ್ದೇಶನ ಮಾಡಿದ್ದಾರೆ. ವಿಕ್ರಂ ದೇವಾಡಿಗ ಹಾಗೂ ಸಂದೀಪ್ ಶೆಟ್ಟಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ನಿರ್ದೇಶಕ ಯಶಂತ್ ಕಲ್ಲಡ್ಕ ಮಾತನಾಡಿ, ‘ಅಪರಾಧಿ ನಾನಲ್ಲ’ ಎಂಬ ಶೀರ್ಷಿಕೆಯ ಹಿಂದೆ ಒಂದು ಕಾರಣವಿದೆ ಎಂದು ಹೇಳಿದ್ದಾರೆ. ಜೈಲಿನಲ್ಲಿ ಇರುವ ಪ್ರತಿಯೊಬ್ಬರೂ ಅಪರಾಧಿಗಳಾಗಿರುವುದಿಲ್ಲ ಎಂಬ ಅಂಶವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಅದಕ್ಕೆ ಸಿನಿಮಾಟಿಕ್ ಅಂಶಗಳನ್ನು ಸೇರಿಸಿ ಕಥೆ ರೂಪಿಸಲಾಗಿದೆ ಎಂದಿದ್ದಾರೆ. 20 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ತಮ್ಮ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ ಎಂದು ತಿಳಿಸಿದ್ದಾರೆ.
ನಟ ಅರ್ಜುನ್ ದೇವ್, ಈ ಸಿನಿಮಾ ಮೂಲಕ ಯಶಂತ್ ಕಲ್ಲಡ್ಕ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ನಾಯಕಿ ಅಮೃತಾ ಮೂರ್ತಿ ಮಾತನಾಡಿ, ಚಿತ್ರದಲ್ಲಿ ತಾವು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದ್ದಾರೆ. ಹೊಸ ತಂಡದ ಈ ಪ್ರಯತ್ನದಲ್ಲಿ ಅರ್ಜುನ್ ಕಾಪಿಕಾಡ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮೃತಾ, ಪ್ರಮೋದ್ ಶೆಟ್ಟಿ, ನವಿಲ್ ಪಡಿಲು, ಅಶೋಕ್ ಹೆಗ್ಡೆ, ನೀತೂ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.